ADVERTISEMENT

ಬಿಜೆಪಿಯವರ ಸಣ್ಣತನ: ಸಿ.ಎಂ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:34 IST
Last Updated 6 ಜುಲೈ 2018, 19:34 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಬೆಂಗಳೂರು: ‘ಇದು ಹಳೇ ಮೈಸೂರು ಪ್ರಾಂತ್ಯದ ಬಜೆಟ್’ ಎಂದು ಆರೋಪಿಸುವ ಮೂಲಕ ಬಿಜೆಪಿಯವರು ಮತ್ತೊಮ್ಮೆ ತಮ್ಮ ಸಣ್ಣತನ ಪ್ರದರ್ಶಿಸಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.

ವಿಧಾನಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದಿನ ಹತ್ತು ವರ್ಷಗಳಲ್ಲಿ ರಾಮನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಿಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂಬ ಬಗ್ಗೆ ಬಿಜೆಪಿಯವರು ಲೆಕ್ಕ ಕೊಡಲಿ. ಆ ನಂತರ ಬೇಕಿದ್ದರೆ ಯಾವ ಪ್ರಾಂತ್ಯದ ಬಜೆಟ್ ಎಂದು ಟೀಕೆ ಮಾಡಿಕೊಳ್ಳಲಿ’ ಎಂದು ಕಿಡಿಕಾರಿದರು.

‘ಈ ಬಾರಿಯ ಬಜೆಟ್‌ನಲ್ಲಿ ಆ ಮೂರು ಜಿಲ್ಲೆಗಳಿಗೆ ಹೆಚ್ಚೆಂದರೆ ₹ 200 ಕೋಟಿವರೆಗೆ ಅನುದಾನ ಕೊಟ್ಟಿರಬಹುದು. ಅದನ್ನೇ ದೊಡ್ಡದು ಮಾಡಿ ಗಲಾಟೆ ಮಾಡುತ್ತಿದ್ದಾರೆ. ಈ ಕುರಿತು ಚರ್ಚೆ ನಡೆಸಲು ಸದನಕ್ಕೆ ಬರಲಿ’ ಎಂದು ವಿರೋಧ ಪಕ್ಷಕ್ಕೆ ಸವಾಲು ಹಾಕಿದರು.

ADVERTISEMENT

ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರನ್ನೂ ತರಾಟೆಗೆ ತಗೆದುಕೊಂಡ ಕುಮಾರಸ್ವಾಮಿ, ‘ನಡಹಳ್ಳಿಗೆ ಬೇರೆ ಕೆಲಸವಿಲ್ಲ. ಉತ್ತರ ಕರ್ನಾಟಕದ ಬಗ್ಗೆ ಅವರಿಗೆ ಬದ್ಧತೆ ಇದ್ದರೆ ತಾನೇ? ತಮಗೆ ಬೇಕಾದಂತೆ ಪಕ್ಷಾಂತರ ಮಾಡಿಕೊಂಡು ಓಡಾಡುವವರು ಅವರು. ಬಜೆಟ್‌ನಲ್ಲಿ ತಾರತಮ್ಯವಾಗಿದೆ ಎಂದು ಹೇಳುವ ಅರ್ಹತೆ ಅವರಿಗಿಲ್ಲ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.