ADVERTISEMENT

Lok Sabha Election 2024 | ‘ಸ್ಟಾರ್’ಗಿರಿ ಬಿಟ್ಟು ಸರದಿಯಲ್ಲಿ ಮತದಾನ

ಸಿನಿಮಾ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಂದ ಹಕ್ಕು ಚಲಾವಣೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 15:38 IST
Last Updated 26 ಏಪ್ರಿಲ್ 2024, 15:38 IST
   

ಬೆಂಗಳೂರು: ರಾಜಕಾರಣಿಗಳ ಜತೆಗೆ ಸಿನಿಮಾ, ಉದ್ಯಮ, ಕ್ರೀಡೆ, ಸಾಹಿತ್ಯ ಸೇರಿ ವಿವಿಧ ಕ್ಷೇತ್ರಗಳ ಪ್ರಮುಖರು ಕೂಡ ಜನಸಾಮಾನ್ಯರ ಜತೆಗೆ ಸರದಿಯಲ್ಲಿ ನಿಂತು ಮತ ಚಲಾಯಿಸಿ ಸಂಭ್ರಮಿಸಿದರು.

ಕೆಲ ನಟ–ನಟಿಯರು ‘ಸ್ಟಾರ್‌’ಗಿರಿಯನ್ನು ಬಿಟ್ಟು ಕುಟುಂಬ ಸಮೇತರಾಗಿ ಬೆಳಿಗ್ಗೆಯೇ ಬಂದು, ಮತ ಹಾಕಿದರು. ಮತಗಟ್ಟೆಯಿಂದ ಹೊರಬರುವ ವೇಳೆ ಶಾಯಿ ಹಚ್ಚಿದ ತೋರು ಬೆರಳನ್ನು ತೋರಿಸಿ, ಹರ್ಷ ವ್ಯಕ್ತಪಡಿಸಿದರು. 

ಶಿಕ್ಷಣ ತಜ್ಞ ಪ್ರೊ.ಎಂ.ಕೆ.ಶ್ರೀಧರ್, ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥರಾದ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿ, ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಸಿನಿಮಾ ಕ್ಷೇತದ ಅನಂತ್ ನಾಗ್, ರವಿಚಂದ್ರನ್, ಉಪೇಂದ್ರ, ರಮೇಶ್‌ ಅರವಿಂದ್‌, ಭಾರತಿ ವಿಷ್ಣುವರ್ಧನ್‌, ಜಗ್ಗೇಶ್, ಸುದೀಪ್, ದರ್ಶನ್, ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ, ದುನಿಯಾ ವಿಜಯ್, ವಿಜಯ ರಾಘವೇಂದ್ರ, ಧ್ರುವ ಸರ್ಜಾ, ಯುವರಾಜ್‌ ಕುಮಾರ್, ರಚಿತಾ ರಾಮ್, ಪೂಜಾಗಾಂಧಿ, ಪ್ರೇಮ್ ಮತ್ತು ರಕ್ಷಿತಾ ದಂಪತಿ, ಪ್ರಕಾಶ್ ರಾಜ್, ಚೈತ್ರಾ ಜೆ. ಆಚಾರ್, ಯುವ ರಾಜಕುಮಾರ್, ವಿನಯ್ ರಾಜಕುಮಾರ್, ರಾಗಿಣಿ ದ್ವಿವೇದಿ, ಮಾಲಾಶ್ರೀ, ಶರಣ್, ಆಶಿಕಾ ರಂಗನಾಥ್‌, ರೀಷ್ಮಾ ನಾಣಯ್ಯ, ಹರ್ಷಿಕಾ ಪೂಣಚ್ಚ ಸೇರಿ ನಟ–ನಟಿಯರು ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. 

ADVERTISEMENT

ನಟ ಶಿವರಾಜ್‌ ಕುಮಾರ್ ಮತ್ತು ಗೀತಾ ದಂಪತಿ ಕುಟುಂಬದೊಂದಿಗೆ ರಾಚೇನಹಳ್ಳಿಯಲ್ಲಿ ಮತ ಚಲಾಯಿಸಿದರು. ರಾಘವೇಂದ್ರ ರಾಜಕುಮಾರ್‌, ಅಶ್ವಿನಿ ಪುನೀತ್‌ ರಾಜಕುಮಾರ್‌ ಹಾಗೂ ಮಂಗಳಾ ರಾಘವೇಂದ್ರ ರಾಜಕುಮಾರ್‌ ಒಟ್ಟಾಗಿ ಬಂದು ಸದಾಶಿವನಗರದಲ್ಲಿ ಮತದಾನ ಮಾಡಿದರು.

ಆರ್.ಆರ್.ನಗರದಲ್ಲಿ ನಟ ಗಣೇಶ್ ಮತ್ತು ಶಿಲ್ಪಾ ದಂಪತಿ, ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿ ಒಟ್ಟಿಗೆ ಬಂದು ಮತ ಹಾಕಿದರು. ನಟ ಶ್ರೀಮುರಳಿ ದಂಪತಿ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕುಟುಂಬದ ಜತೆಗೆ ಬಂದು ಮತ ಚಲಾಯಿಸಿದರು. ಜೆ.ಪಿ.ನಗರದಲ್ಲಿರುವ ಸೇಂಟ್ ಪೌಲ್ ಸ್ಕೂಲ್​ನಲ್ಲಿ ನಟಿ ಸಪ್ತಮಿ ಗೌಡ ಮತದಾನ ಮಾಡಿದರು. ದೊಡ್ಡಬಿದರಕಲ್ಲು ರೆಡ್ಡಿಕಟ್ಟೆ ಸರ್ಕಾರಿ ಶಾಲೆಯಲ್ಲಿ ನಟ ದೊಡ್ಡಣ್ಣ ದಂಪತಿ ಮತ ಹಾಕಿದರು.

ಅದಮ್ಯ ಚೇತನ ಮುಖ್ಯಸ್ಥರಾದ ತೇಜಸ್ವಿನಿ ಅನಂತಕುಮಾರ್ ಅವರು ವಾಸವಿ ವಿದ್ಯಾನಿಕೆತನ ಕಾಲೇಜಿನಲ್ಲಿ ಕುಟುಂಬದ ಸದಸ್ಯರ ಜತೆಗೆ ಮತದಾನ ಮಾಡಿದರು.

‘ಜವಾಬ್ದಾರಿ, ಬುದ್ಧಿ ಇರುವವರು, ದೇಶ–ರಾಜ್ಯದ ಮೇಲೆ ಪ್ರೀತಿ ಇರುವವರು ಮತದಾನ ಮಾಡುತ್ತಾರೆ’ ಎಂದು ಸುದೀಪ್ ತಿಳಿಸಿದರು. 

‘ಪ್ರತಿ ಬಾರಿ ಮತದಾನ ಮಾಡಿದಾಗ ಹೆಮ್ಮೆಯಾಗುತ್ತದೆ. ಎಲ್ಲ ಧರ್ಮಗಳಲ್ಲೂ ಒಂದೊಂದು ಹಬ್ಬ ಇರುತ್ತದೆ. ಅದಕ್ಕೆ ಎಷ್ಟು ಬೆಲೆ ಕೊಡುತ್ತೇವೆಯೋ ಮತದಾನವೆಂಬ ಈ ರಾಷ್ಟ್ರಹಬ್ಬಕ್ಕೂ ಅಷ್ಟೇ ಬೆಲೆ ಕೊಡಬೇಕು. ಅಭಿವೃದ್ಧಿಗೆ ಓಂಕಾರ ಈ ಮತದಾನ’ ಎಂದು ಜಗ್ಗೇಶ್ ಬಣ್ಣಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.