ADVERTISEMENT

ಎವರೆಸ್ಟ್‌ನಲ್ಲಿ ಹಿಮಕುಸಿತ: 10 ಸಾವು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2015, 19:30 IST
Last Updated 25 ಏಪ್ರಿಲ್ 2015, 19:30 IST

ಕಠ್ಮಂಡು (ಪಿಟಿಐ): ವಿಶ್ವದ ಅತ್ಯಂತ ಎತ್ತರವಾದ ಪರ್ವತ ಶಿಖರವಾದ ಮೌಂಟ್‌ ಎವರೆಸ್ಟ್‌ನಲ್ಲಿ ಶನಿವಾರ ಸಂಭವಿಸಿದ ಹಿಮಕುಸಿತದಲ್ಲಿ ವಿದೇಶಿಯರು ಕನಿಷ್ಠ ಮಂದಿ 10 ಚಾರಣಿಗರು ಮೃತಪಟ್ಟಿದ್ದಾರೆ. ನೇಪಾಳದ ಪ್ರಬಲ ಭೂಕಂಪನ ಸಂಭವಿಸಿದ ಬೆನ್ನಲ್ಲೇ, ಎವರೆಸ್ಟ್‌ನಲ್ಲಿ ಭಾರಿ ಹಿಮಕುಸಿತವಾಗಿದೆ.

‘ಘಟನಾ ಸ್ಥಳಕ್ಕೆ ತೆರಳಿರುವ ಪರಿಹಾರ ಕಾರ್ಯಾಚರಣೆ ಸಿಬ್ಬಂದಿ ಇದುವರೆಗೂ ಎಂಟು ಮೃತಹದೇಹಗಳನ್ನು ಪತ್ತೆಹಚ್ಚಿದ್ದಾರೆ. ಚಾರಣಿಗರು ಉಳಿದುಕೊಂಡಿದ್ದ ಶಿಬಿರದಲ್ಲಿ ಬಳಿಯೇ ಹಿಮಕುಸಿತವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ’ ಎಂದು ನೇಪಾಳದ ಪ್ರವಾಸೋದ್ಯಮ ಖಾತೆ ಸಚಿವ ಗ್ಯಾನೇಂದ್ರ ಶ್ರೇಷ್ಠ ತಿಳಿಸಿದ್ದಾರೆ.

ನವದೆಹಲಿ ವರದಿ: ಎವರೆಸ್ಟ್‌ನಲ್ಲಿ ತಮಗಾದ ಭೂಕಂಪನದ ಅನುಭವಗಳನ್ನು ಮೌಂಟ್‌ ಎವರೆಸ್ಟ್‌ ಪರ್ವತವೇರುತ್ತಿದ್ದ ಅನೇಕ ಚಾರಣಿಗರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಅಲ್ಲಿನ ಪರಿಸ್ಥಿತಿ ಮತ್ತು ಹಾನಿಯ ಕುರಿತು ಸಹ ಅವರು ವಿವರಿಸಿದ್ದಾರೆ.

‘ಎವರೆಸ್ಟ್‌ನಲ್ಲಿ ಈಗಷ್ಟೇ ಭಾರೀ ಮೂಲಶಿಬಿರ  ತೀವ್ರವಾಗಿ ಹಾನಿಗೊಳಗಾಗಿದೆ. ನಮ್ಮ ತಂಡ 1ನೇ ಶಿಬಿರದಲ್ಲಿ ಸಿಲುಕಿಕೊಂಡಿದೆ. ದಯವಿಟ್ಟು ಎಲ್ಲರಿಗಾಗಿ ಪ್ರಾರ್ಥಿಸಿ’ ಎಂದು ಇಂಗ್ಲೆಂಡ್‌ನ ಚಾರಣಿಗ ಡೇನಿಯಲ್ ಮಜುರ್ ಅವರು ಟ್ವೀಟ್‌ ಮಾಡಿದ್ದಾರೆ.
ಕೆಲ ನಿಮಿಷಗಳ ಬಳಿಕ ಮರು ಭೂಕಂಪನದ ಅನುಭವಗಳಾಗುತ್ತಿರುವುದನ್ನು ಟ್ವೀಟಿಸಿರುವ ಅವರು, ಸಾಗಬೇಕಾಗಿದ್ದ ಮಾರ್ಗ ಹಾನಿಗೊಳಗಾಗಿರುವುದನ್ನು ಹೇಳಿಕೊಂಡಿದ್ದಾರೆ.

ಅಪಾರ ಪ್ರಮಾಣದಲ್ಲಿ ಕಲ್ಲು ಮತ್ತು ಮಂಜುಗೆಡ್ಡೆ ತುಂಡುಗಳು ಪರ್ವತದಿಂದ ಕೆಳಕ್ಕುರುಳುತ್ತಿರುವುದನ್ನು ಮತ್ತೊಬ್ಬ ಚಾರಣಿಗ ಆಡ್ರಿಯಾನ್ ಬಲ್ಲಿಂಜೆರ್ ಅವರು ಟ್ವೀಟ್ ಮಾಡಿದ್ದಾರೆ.

‘ನಾವು ಒಂದನೇ ಶಿಬಿರದಲ್ಲಿ ಸುರಕ್ಷಿತವಾಗಿದ್ದೇವೆ. ನಮ್ಮ ಸಮೀಪದಲ್ಲಿಯೇ ಭೂಕಂಪನವಾಗಿತ್ತು.  ಮಂಜುಗೆಡ್ಡೆ ಪುಡಿಯಾಗಿ ಸಿಡಿದಿದ್ದರೆ, ನೀರ್ಗಲ್ಲುಗಳು ಚಲಿಸುತ್ತಿವೆ.  ಮೂಲ ಶಿಬಿರದಲ್ಲಿ ಗಾಯಾಳುಗಳಿದ್ದಾರೆ’ ಎಂದು ಅಮೆರಿಕದ ಚಾರಣಿಗ ಜಿ ಡೇವಿಡ್ಸನ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.