ವಾಷಿಂಗ್ಟನ್: ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ನ್ಯಾಯಮೂರ್ತಿಯನ್ನು ಆಯ್ಕೆ ಮಾಡುವ ಸಂಬಂಧ ಸೋಮವಾರ ಹೊಸದಾಗಿ ಮತದಾನ ನಡೆಯಲಿದ್ದು, ಇದಕ್ಕಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಹಾಗೂ ಭದ್ರತಾ ಮಂಡಳಿ ಸಭೆ ಸೇರಲಿದೆ.
ಭಾರತದ ದಲ್ವೀರ್ ಭಂಡಾರಿ ಹಾಗೂ ಬ್ರಿಟನ್ನ ಕ್ರಿಸ್ಟೋಫರ್ ಗ್ರೀನ್ವುಡ್ ಅವರ ಆಯ್ಕೆ ಕಗ್ಗಂಟಾಗಿಯೇ ಇರುವುದರಿಂದ ಮತ್ತೆ ಮತದಾನ ನಡೆಸಲು ನಿರ್ಧರಿಸಲಾಗಿದೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆ ಹಾಗೂ ಭದ್ರತಾ ಮಂಡಳಿ ನಡೆಸಿದ 11 ಸುತ್ತಿನ ಚುನಾವಣೆಗಳಲ್ಲಿಯೂ ಅಂತಿಮವಾಗಿ ನ್ಯಾಯಮೂರ್ತಿಯನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ.
ಇಬ್ಬರೂ ಅಭ್ಯರ್ಥಿಗಳು ಮರು ಆಯ್ಕೆಗಾಗಿ ಚುನಾವಣೆ ಎದುರಿಸುತ್ತಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಂಡಾರಿ ಅವರು ಹೆಚ್ಚಿನ ಮತ ಗಳಿಸಿದ್ದರು. ಭದ್ರತಾ ಮಂಡಳಿಯಲ್ಲಿ ಗ್ರೀನ್ವುಡ್ ಅವರು 9 ಮತಗಳನ್ನು ಹಾಗೂ ಭಂಡಾರಿ ಅವರು 5 ಮತಗಳನ್ನು ಗಳಿಸಿದ್ದರು. ಅಂತರರಾಷ್ಟ್ರೀಯ ನ್ಯಾಯಮಂಡಳಿ ನಿಯಮಾವಳಿ ಪ್ರಕಾರ, ಅಭ್ಯರ್ಥಿಗಳು ಎರಡೂ ಕಡೆ ಬಹುಮತ ಗಳಿಸಿದ್ದರಷ್ಟೆ ನ್ಯಾಯಮೂರ್ತಿಯಾಗಿ ಆಯ್ಕೆಯಾಗುತ್ತಾರೆ.
ಸೋಮವಾರವೂ ಅಭ್ಯರ್ಥಿ ಆಯ್ಕೆ ನಿರ್ಣಯವಾಗದಿದ್ದರೆ, ಆಯ್ಕೆಗಾಗಿ ಬೇರೆ ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಮಿರೊಸ್ಲವ್ ಲಜಕ್ ಅವರ ವಕ್ತಾರ ಬ್ರಂದನ್ ವರ್ಮ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.