ಟೊರೆಂಟೊ (ಪಿಟಿಐ): ಇಲ್ಲಿನ ಎಲಿಜಬೆತ್ ಸ್ಪೀಡ್ವೇನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಸಿಖ್ ಸಮುದಾಯಕ್ಕೆ ಸೇರಿದ ಭಾರತ ಮೂಲದ ಮನ್ಮೀತ್ ಭುಲ್ಲರ್ (53) ಮೃತಪಟ್ಟಿದ್ದಾರೆ.
ಭುಲ್ಲರ್ ಅವರು ಕೆನಡಾದ ಆಲ್ಬರ್ಟ ರಾಜ್ಯದ ಕಲ್ಗರಿ ಗ್ರೀನ್ವೇ ಕ್ಷೇತ್ರದ ಶಾಸಕರಾಗಿದ್ದರು. ಎಲಿಜಬೆತ್ ಸ್ಪೀಡ್ವೇಯಲ್ಲಿ ಮನ್ಮೀತ್ ಕಾರು ಚಲಾಯಿಸುತ್ತಿದ್ದರು. ಅವರ ಕಾರಿನ ಮುಂದೆ ಚಲಿಸುತ್ತಿದ್ದ ಬೈಕ್ ಸವಾರ ರಸ್ತೆಯಲ್ಲಿ ತುಂಬಿದ್ದ ಹಿಮದ ಮೇಲೆ ಜಾರಿ ಬಿದ್ದಿದ್ದಾರೆ.
ತಮ್ಮ ಕಾರಿಗೆ ಸಿಲುಕುವುದರಲ್ಲಿದ್ದ ಬೈಕ್ ಸವಾರನನ್ನು ರಕ್ಷಿಸುವ ಸಲುವಾಗಿ ಅವರು ಬ್ರೇಕ್ ಹಾಕಿದ್ದಾರೆ. ಆಗ ಅವರ ಹಿಂದೆ ಬರುತ್ತಿದ್ದ ಟ್ರಕ್ ಅವರ ಕಾರ್ಗೆ ಅಪ್ಪಳಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಮನ್ಮೀತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಮನ್ಮೀತ್ ಅವರನ್ನು ಹತ್ತಿರದಿಂದ ಬಲ್ಲವರು ಮತ್ತು ಅವರ ಕೆಲಸಗಳ ಬಗ್ಗೆ ತಿಳಿದವರಿಗೆ ಇದೊಂದು ಆಘಾತಕಾರಿ ಸುದ್ದಿ. ಆಲ್ಬರ್ಟ ಪ್ರಾಂತಕ್ಕೆ ಇದು ಭರಿಸಲಾಗದ ನಷ್ಟ’ ಎಂದು ಆಲ್ಬರ್ಟ ಪ್ರಾಂತದ ಮಾಜಿ ಗವರ್ನರ್ ಜಿಮ್ ಪ್ರೆಂಟಿಸ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.