ವಾಷಿಂಗ್ಟನ್: ಭಾರತ, ಚೀನಾ ನಡುವಣ ಗಡಿ ಸಮಸ್ಯೆಯ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್, ‘ಇತ್ತೀಚಿನ ವರ್ಷಗಳಲ್ಲಿ ಚೀನಾ ತನ್ನ ನೆರೆಯ ಎಲ್ಲಾ ದೇಶಗಳೊಂದಿಗೂ ಗಡಿ ವಿಚಾರವಾಗಿ ವಿವಾದ ಹೊಂದಿದೆ. ದೋಕಲಾ ಭಾಗದಲ್ಲಿಯೂ ಚೀನಾ ತನ್ನ ‘ಏಕಪಕ್ಷೀಯ’ ಧೋರಣೆಯನ್ನು ಮುಂದುವರಿಸಿದೆ. ಈ ವಿಚಾರದಲ್ಲಿ ಭಾರತ ದಿಟ್ಟ ನಿರ್ಧಾರವನ್ನೇ ಕೈಗೊಂಡಿದೆ’ ಎಂದಿದೆ.
‘ಭಾರತ ಹಾಗೂ ಚೀನಾ ಗಡಿ ಸಮಸ್ಯೆಯನ್ನು ಪರಿಹರಿಸುವ ಸಂಬಂಧ ಇತರೆ ವಿಚಾರಗಳನ್ನು ಬದಿಗೊತ್ತಿ ನೇರ ಮಾತುಕತೆಗೆ ಮುಂದಾಗಬೇಕು’ ಎಂದು ಇಲಾಖೆಯ ವಕ್ತಾರ ಗ್ಯಾರಿ ರೋಸ್ ಸಲಹೆ ನೀಡಿದ್ದು, ಪ್ರೋತ್ಸಾಹ ನೀಡುವುದಾಗಿಯೂ ಹೇಳಿದ್ದಾರೆ.
ಸಿಕ್ಕಿಂ ಗಡಿ ವಲಯದ ದೋಕಲಾ ಪ್ರದೇಶದಲ್ಲಿ ಚೀನಾ ಸೇನೆ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲು ಮುಂದಾಗಿತ್ತು. ಭಾರತ ಸೇನೆ ಇದಕ್ಕೆ ಅವಕಾಶ ನೀಡಿರಲಿಲ್ಲ. ಇದರಿಂದಾಗಿ ಗಡಿ ವಿವಾದ ತಲೆದೋರಿದ್ದು, ಉಭಯ ದೇಶಗಳೂ ಗಡಿಯಲ್ಲಿ ಸೇನೆಯನ್ನು ನಿಯೋಜಿಸಿವೆ. ಇದು ಯುದ್ಧದ ಆತಂಕ ಸೃಷ್ಟಿಯಾಗಲು ಕಾರಣವಾಗಿದೆ.
ಮುಂದಿನ ವಾರ ಚೀನಾ ರಾಜಧಾನಿ ಬೀಜಿಂಗ್ನಲ್ಲಿ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಂಸ್ಥೆಗಳ ಸಭೆಯಲ್ಲಿ ದೇಶದ ರಕ್ಷಣಾ ಸಲಹೆಗಾರ ಅಜಿತ್ ದೋವೆಲ್ ಅವರು ಭಾಗವಹಿಸಲಿದ್ದಾರೆ. ಈ ವೇಳೆ ಗಡಿ ವಿವಾದ ಕುರಿತು ಚೀನಾ ಜತೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.