ಇಸ್ಲಾಮಾಬಾದ್: ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ವಿಧಿಸಿರುವ ಮರಣ ದಂಡನೆ ರದ್ದಾಗದಿದ್ದರೆ ತಕ್ಷಣವೇ ಅವರಿಗೆ ಶಿಕ್ಷೆ ಜಾರಿ ಮಾಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಲಾಗಿದೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುಖಂಡ ಮತ್ತು ವಕೀಲ ಫಾರೂಕ್ ನಾಯ್ಕ್ ಮೂಲಕ ಮುಜಮ್ಮಿಲ್ ಅಲಿ ಎಂಬುವವರು ಈ ಅರ್ಜಿ ಸಲ್ಲಿಸಿದ್ದಾರೆ.
ಜಾಧವ್ ಅವರ ಯಾವುದೇ ಮೇಲ್ಮನವಿ ಬಾಕಿ ಇದ್ದರೆ ಅದನ್ನು ತಕ್ಷಣವೇ ವಿಲೇವಾರಿ ಮಾಡುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದೂ ಕೋರಲಾಗಿದೆ.
ಕಾನೂನು ಪ್ರಕಾರವೇ ಜಾಧವ್ ವಿಚಾರಣೆ ನಡೆಸಲಾಗಿದೆ ಮತ್ತು ಭಾರತದ ಬೇಡಿಕೆಯಂತೆ ಅವರಿಗೆ ಕಾನ್ಸಲ್ ನೆರವು ನೀಡಲಾಗಿದೆ ಎಂದು ಸರ್ಕಾರ ಘೋಷಿಸಬೇಕು ಎಂದು ಅರ್ಜಿಯಲ್ಲಿ ಕೋರಿದೆ.
ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಭಾರತದ ವಾದವು 2008ರ ಒಪ್ಪಂದ ಮತ್ತು ವಿಯೆನ್ನಾ ಒಪ್ಪಂದದ ಉಲ್ಲಂಘನೆಯಾಗಿದೆ. ವಿಯೆನ್ನಾ ಒಪ್ಪಂದದ ನಿಯಮಗಳಿಗೆ ಪಾಕಿಸ್ತಾನ ಬದ್ಧವಾಗಿರಬೇಕಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಕಳೆದ ಮಾರ್ಚ್ 3ರಂದು ಬಲೂಚಿಸ್ತಾನ ಪ್ರಾಂತ್ಯದಲ್ಲಿ ಜಾಧವ್ ಅವರನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಗೂಢಚರ್ಯೆ ಆರೋಪದಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿದೆ. ಈ ಆದೇಶಕ್ಕೆ ಐಸಿಜೆ ಇತ್ತೀಚೆಗೆ ತಡೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.