ನವದೆಹಲಿ: ಸಿಕ್ಕಿಂ ವಲಯದ ದೋಕಲಾದಲ್ಲಿ ಕೆಲವು ದಿನಗಳಿಂದ ಭಾರತೀಯ ಮತ್ತು ಚೀನಾ ಯೋಧರ ಸಂಘರ್ಷದಿಂದ ಉದ್ಭವಿಸಿರುವ ತ್ವೇಷಮಯ ಪರಿಸ್ಥಿತಿಯ ಶಮನಕ್ಕೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೋಮವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೋಕಲಾ ಪರಿಸ್ಥಿತಿ ತಿಳಿಗೊಳಿಸುವ ಭಾರತದ ಪ್ರಯತ್ನಕ್ಕೆ ಚೀನಾ ಕೂಡ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಇಂಡೋ–ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಸಚಿವರು,‘ಗಡಿ ವಿಸ್ತರಣೆ ಹಪಾಹಪಿ ಭಾರತಕ್ಕಿಲ್ಲ. ಆದರೆ, ದೇಶದ ಸಾರ್ವಭೌಮತೆ ಮತ್ತು ನಮ್ಮ ಗಡಿಗಳನ್ನು ರಕ್ಷಿಸುವ ಸಾಮರ್ಥ್ಯ ಭಾರತೀಯ ಸೇನೆಗೆ ಇದೆ’ ಎಂದು ಭರವಸೆ ನೀಡಿದರು.
‘ಭಾರತದ ಸೌಮ್ಯ ಸ್ವಭಾವ ಇಡೀ ವಿಶ್ವಕ್ಕೆ ಚೆನ್ನಾಗಿ ಗೊತ್ತಿದೆ. ನೆರೆಯ ರಾಷ್ಟ್ರಗಳೊಂದಿಗೆ ವಿನಾಕಾರಣ ಕಾಲು ಕೆರೆದು ಜಗಳಕ್ಕಿಳಿಯುವ ಸ್ವಭಾವ ಭಾರತದ್ದಲ್ಲ.ಅನಗತ್ಯ ತಂಟೆ, ತಕರಾರು ಮಾಡುವ ತಂಟೆಕೋರ ರಾಷ್ಟ್ರವಲ್ಲ. ಯಾವುದೇ ದೇಶದ ಮೇಲೆ ದಂಡೆತ್ತಿ ಹೋದ ನಿದರ್ಶನಗಳಿಲ್ಲ. ಸಾಮ್ರಾಜ್ಯ ವಿಸ್ತರಣೆ, ಅತಿಕ್ರಮಣದ ಹಪಾಹಪಿಯೂ ಇಲ್ಲ’ ಎಂದರು.
‘ಸ್ನೇಹಿತರು ಬದಲಾಗಬಹುದು.ಆದರೆ, ನೆರೆಹೊರೆಯವರು ಅಲ್ಲ’ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳುತ್ತಿದ್ದರು. ಭಾರತ ತನ್ನ ನೆರೆಯ ರಾಷ್ಟ್ರಗಳೊಂದಿಗೆ ಸದಾ ಸೌಹಾರ್ದಯುತವಾದ ಸಂಬಂಧ ಹೊಂದಲು ಬಯಸುತ್ತದೆ. ಇದು ಕೇವಲ ಹಸ್ತಲಾಘವದಂತಹ ಔಪಚಾರಿಕತೆಗೆ ಸೀಮಿತವಾದದ್ದಲ್ಲ. ಹೃದಯಗಳನ್ನು ಬೆಸೆಯುವ ಸಂಬಂಧವಾಗಬೇಕು ಎನ್ನುವುದು ನಮ್ಮ ಆಶಯ’ ಎಂದು ರಾಜನಾಥ್ ಸಿಂಗ್ ಹೇಳಿದರು.
**
ನೆರೆಯ ರಾಷ್ಟ್ರಗಳೊಂದಿಗೆ ನಮಗೆ ಯುದ್ಧ ಬೇಕಿಲ್ಲ. ಭಾರತ ಸದಾ ಶಾಂತಿಯನ್ನು ಬಯಸುತ್ತೇವೆ.
– ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.