ADVERTISEMENT

ಭೋಪಾಲ್‌ ಅನಿಲ ದುರಂತದ ಆರೋಪಿ ಆ್ಯಂಡರ್ಸನ್ ನಿಧನ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 11:19 IST
Last Updated 31 ಅಕ್ಟೋಬರ್ 2014, 11:19 IST

ನ್ಯೂಯಾರ್ಕ್‌ (ಪಿಟಿಐ): ಭೋಪಾಲ್‌ ಅನಿಲ ದುರಂತದ ಪ್ರಮುಖ ಆರೋಪಿ, ‘ಯೂನಿಯನ್‌ ಕಾರ್ಬೈಡ್‌’ ಕಾರ್ಪೊರೇಷನ್‌ ಮಾಜಿ ಅಧ್ಯಕ್ಷ ವಾರನ್‌ ಆ್ಯಂಡರ್ಸನ್  (92) ಮೃತಪಟ್ಟಿದ್ದಾರೆ.

ಸೆಪ್ಟೆಂಬರ್‌ 29ರಂದು  ಫ್ಲಾರಿಡಾದ ಆಸ್ಪತ್ರೆಯೊಂದರಲ್ಲಿ ಆ್ಯಂಡರ್ಸನ್ ಮೃತಪಟ್ಟಿದ್ದರು. ಆದರೆ, ಇದುವರೆಗೆ ಅವರ ಕುಟುಂಬ ಅದನ್ನು ಧೃಡಪಡಿ­ಸಿರಲಿಲ್ಲ. ಶುಕ್ರವಾರ ಇದು ಅಧಿಕೃತವಾಗಿ ಹೊರಬಿದ್ದಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

ಭೋಪಾಲ್‌ ಅನಿಲ ದುರಂತಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆ್ಯಂಡರ್ಸನ್ ಅವರನ್ನು ಹಸ್ತಾಂತರಿಸುವಂತೆ ಭಾರತ ಸರ್ಕಾರ ಹಲವು ಬಾರಿ ಅಮೆರಿಕಕ್ಕೆ ಮನವಿ ಮಾಡಿತ್ತು.

1984ರ ಡಿಸೆಂಬರ್‌ 23ರ ಮಧ್ಯರಾತ್ರಿ  ಭೋಪಾಲ್‌ ಅನಿಲ ದುರಂತ ನಡೆದಿತ್ತು. ದುರಂತದಲ್ಲಿ 3 ಸಾವಿರಕ್ಕೂ  ಹೆಚ್ಚು ಮಂದಿ ಮೃತಪಟ್ಟಿದ್ದರು.   ಇದು  ಪ್ರಪಂಚದ ಅತಿ ದೊಡ್ಡ ಕೈಗಾರಿಕಾ ದುರಂತಗಳಲ್ಲಿ ಒಂದು ಎಂದು ಗುರುತಿಸಲಾಗಿದೆ.  ದುರಂತ ನಡೆ­ಯುವ ಸಂದರ್ಭದಲ್ಲಿ ಆ್ಯಂಡರ್ಸನ್ ಯೂನಿಯನ್‌ ಕಾರ್ಬೈಡ್‌ ಕಂಪೆನಿಯ ಅಧ್ಯಕ್ಷರಾಗಿದ್ದರು.

ದುರಂತ ನಡೆದ ನಾಲ್ಕು ದಿನಗಳ ಬಳಿಕ ಆ್ಯಂಡರ್ಸನ್ ಭೋಪಾಲ್‌ಗೆ ಬಂದಿದ್ದರು. ತಕ್ಷಣವೇ ಅವರನ್ನು ಬಂಧಿಸಲಾಗಿತ್ತು. ಆದರೆ, ಕೂಡಲೇ ಜಾಮೀನು ಪಡೆದ ಅವರು ನಂತರ ಅಮೆರಿಕಕ್ಕೆ ಪಲಾಯನ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT