ಲಂಡನ್/ಬಾಗ್ದಾದ್: ಪಶ್ಚಿಮ ಮೊಸುಲ್ನಲ್ಲಿ 3.50 ಲಕ್ಷ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದು, ಅವರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಲಂಡನ್ನ ದತ್ತಿ ಸಂಸ್ಥೆ ‘ಸೇವ್ ದ ಚಿಲ್ಡ್ರನ್’ ಆಗ್ರಹಿಸಿದೆ.
ಪಶ್ಚಿಮ ಮೊಸುಲ್ ಅನ್ನು ಐಎಸ್ ಉಗ್ರರಿಂದ ಮರುವಶಪಡಿಸಿಕೊಳ್ಳಲು ಇರಾಕ್ ಪಡೆಗಳು ಭಾನುವಾರ ಹೊಸದಾಗಿ ದಾಳಿ ಆರಂಭಿಸಿರುವ ಕಾರಣ ಈ ಆಗ್ರಹ ವ್ಯಕ್ತವಾಗಿದೆ.
‘ಇರಾಕ್, ಅಮೆರಿಕ ಮತ್ತು ಬ್ರಿಟನ್ ಮಿತ್ರ ಪಡೆಗಳು ಸಂಕಷ್ಟದಲ್ಲಿರುವ ಮಕ್ಕಳ ಮತ್ತು ಅವರ ಕುಟುಂಬದವರ ರಕ್ಷಣೆಗೆ ಮುಂದಾಗಬೇಕು. ಶಾಲೆ, ಆಸ್ಪತ್ರೆ, ನಾಗರಿಕ ಕಟ್ಟಡಗಳ ಮೇಲೆ ದಾಳಿ ನಡೆಸಬಾರದು’ ಎಂದು ಸೇವ್ ದ ಚಿಲ್ಡ್ರನ್ ನ ಇರಾಕ್ ಘಟಕದ ನಿರ್ದೇಶಕ ಮೌರಿಜಿಯೊ ಕ್ರಿವಲ್ಲೆರೊ ಹೇಳಿದ್ದಾರೆ.
‘ಐಎಸ್ ಉಗ್ರರು ಹತ್ಯೆ ಮಾಡಬಹುದು ಎನ್ನುವ ಹೆದರಿಕೆಯಿಂದ ಹೆಚ್ಚಿನ ಕುಟುಂಬಗಳಿಗೆ ಅಲ್ಲಿಂದ ಪಲಾಯನ ಮಾಡಲೂ ಸಾಧ್ಯವಾಗುತ್ತಿಲ್ಲ. ಆಹಾರ, ನೀರು ಮತ್ತು ಔಷಧ ದೊರೆಯದೆ ಅವರು ತೊಂದರೆಗೆ ಸಿಲುಕಿದ್ದಾರೆ. ನಾಗರಿಕರಿಗೆ ತಪ್ಪಿಸಿಕೊಳ್ಳಲು ಸುರಕ್ಷಿತ ದಾರಿ ತೋರಿಸಿಕೊಡಬೇಕು’ ಎಂದಿದ್ದಾರೆ.
*
ಮೋಸುಲ್ನಲ್ಲೇ ಇದ್ದರೆ ಬಾಂಬ್ ದಾಳಿಗೆ ತುತ್ತಾಗಬೇಕು. ಇಲ್ಲವೇ ಹಸಿವಿನಿಂದ ಬಳಲಬೇಕು. ಓಡಿಹೋಗಲು ಯತ್ನಿಸಿದರೆ ಉಗ್ರರಿಂದ ಹತ್ಯೆಯಾಗುವುದು ನಿಶ್ಚಿತ.
-ಮೌರಿಜಿಯೊ ಕ್ರಿವಲ್ಲೆರೊ, ‘ಸೇವ್ ದ ಚಿಲ್ಡ್ರನ್’ನ ಇರಾಕ್ ಘಟಕದ ನಿರ್ದೇಶಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.