ವಿಶ್ವಸಂಸ್ಥೆ : ಗಡಿ ನಿಯಂತ್ರಣ ರೇಖೆ ಬಳಿ ವಿಶ್ವಸಂಸ್ಥೆಯ ಸೇನಾ ವೀಕ್ಷಕರನ್ನು ಗುರಿಯಾಗಿಸಿ ಭಾರತದ ಪಡೆಗಳು ದಾಳಿ ನಡೆಸಿವೆ ಎಂಬ ಪಾಕಿಸ್ತಾನ ಆರೋಪವನ್ನು ವಿಶ್ವಸಂಸ್ಥೆ ತಳ್ಳಿಹಾಕಿದೆ.
‘ಪಾಕಿಸ್ತಾನದ ಆಡಳಿತವಿರುವ ಕಾಶ್ಮೀರದ ಭಿಂಬರ್ ಜಿಲ್ಲೆಯಲ್ಲಿ ಸಂಚರಿಸುವಾಗ ವೀಕ್ಷಕರ ತಂಡವು ಗುಂಡಿನ ಸದ್ದನ್ನು ಕೇಳಿಸಿಕೊಂಡಿದೆ. ಆದರೆ ಈ ತಂಡವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು ಎಂಬುದಕ್ಕೆ ಪುರಾವೆಗಳಿಲ್ಲ. ತಂಡದ ಸದಸ್ಯರಿಗೆ ಏನೂ ಹಾನಿಯಾಗಿಲ್ಲ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೊ ಗುಟೆರಸ್ ಅವರ ವಕ್ತಾರ ಸ್ಟೆಫಾನ್ ದುಜಾರಿಕ್ ಬುಧವಾರ ಹೇಳಿದ್ದಾರೆ.
‘ಕಾಶ್ಮೀರ ವಿಚಾರದಲ್ಲಿ ನಮಗೆ ಕಾಳಜಿ ಇದೆ. ನಾವು ಹತ್ತಿರದಿಂದ ಗಮನಿಸುತ್ತಿರುವ ಅಂಶಗಳಲ್ಲಿ ಇದೂ ಒಂದು’ ಎಂದು ಅವರು ತಿಳಿಸಿದ್ದಾರೆ.
ಸೇನಾ ವೀಕ್ಷಕರ ತಂಡದ ಇಬ್ಬರು ಸದಸ್ಯರಿದ್ದ ವಾಹನವು ಗಡಿ ನಿಯಂತ್ರಣ ರೇಖೆ ಬಳಿ ಸಂಚರಿಸುತ್ತಿದ್ದಾಗ ಭಾರತದ ಸೇನೆಯು ಗುಂಡಿನ ದಾಳಿ ನಡೆಸಿದೆ ಎಂಬ ಪಾಕ್ ಸೇನಾಪಡೆಯ ಮಾಧ್ಯಮ ವಿಭಾಗದ ಹೇಳಿಕೆಯನ್ನು ಉಲ್ಲೇಖಿಸಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.