ಅನಂತಮೂರ್ತಿ ಅವರ ನಿಧನಕ್ಕೆ ಕೆಲ ರೋಗಗ್ರಸ್ತ ಮನಸ್ಸುಗಳು ಸಂಭ್ರಮ ವ್ಯಕ್ತಪಡಿಸಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ವಿಚಾರವನ್ನು ವಿಚಾರದ ಮೂಲಕ ಎದುರಿಸುವ ಬದಲು ಆ ವಿಚಾರದ ಪ್ರತಿಪಾದಕನನ್ನೇ ಮುಗಿಸಿಬಿಡಬೇಕು ಎನ್ನುವ ಪ್ರತಿಗಾಮಿ ಸಿದ್ಧಾಂತವೊಂದರ ಬಹುಮುಖ್ಯ ಭಾಗವಿದು. 1948ರಷ್ಟು ಹಿಂದೆಯೇ ಗಾಂಧೀಜಿ ಅವರನ್ನು ಕೊಂದ ಮತ್ತು ಅವರ ಸಾವನ್ನು ಸಿಹಿ ಹಂಚಿ ಸಂಭ್ರಮಿಸಿದ ಅದೇ ಸಿದ್ಧಾಂತ ಇಂದಿಗೂ ಜೀವಂತವಾಗಿ ಇರುವುದಷ್ಟೇ ಅಲ್ಲ, ದಿನದಿಂದ ದಿನಕ್ಕೆ ಅದು ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಇದು ಅಂತಹ ಕೊನೆಯ ಘಟನೆಯೂ ಆಗಿರುವುದಿಲ್ಲ.
ಹಾಗೆ ನೋಡಿದರೆ ಧರ್ಮ, ದೇವರು, ಸಂಸ್ಕೃತಿ, ದೇಶಪ್ರೇಮ ಮೊದಲಾದವುಗಳ ಪ್ರಾಥಮಿಕ ತಿಳಿವಳಿಕೆಯೂ ಇಲ್ಲದೆ, ಸಾವನ್ನು
ಸಂಭ್ರಮಿಸಿ ಮಹತ್ತರವಾದುದನ್ನು ಸಾಧಿಸಿದ್ದೇವೆ ಅಂದುಕೊಳ್ಳುವ ಆ ಮುಗ್ಧರನ್ನು ಖಂಡಿಸಿ ಪ್ರಯೋಜನವಿಲ್ಲ. ಅವರು ಕೇವಲ ಪಾತ್ರಧಾರಿಗಳು. ಖಂಡಿಸಬೇಕಿರುವುದು ಧರ್ಮ, ದೇವರು, ಸಂಸ್ಕೃತಿಯ ಹೆಸರಿನಲ್ಲಿ ಅವರ ತಲೆ ಕೆಡಿಸಿ ಮಾನವತೆಯ ಶತ್ರುಗಳಾಗುವಂತೆ ಅವರನ್ನು ಛೂ ಬಿಟ್ಟಿರುವ ತೆರೆಮರೆಯ ಸೂತ್ರಧಾರಿಗಳನ್ನು. ತಾವು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದುದು ಈ ಸೂತ್ರಧಾರಿಗಳು. ಆದರೆ ಆತ್ಮವೇ ಇಲ್ಲದ ಮಂದಿ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದೇ ಮೂರ್ಖತನವಲ್ಲವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.