ಪಂಜಾಬ್, ಗೋಹತ್ಯಾ ನಿಷೇಧ ಪ್ರಶ್ನೆಗಳ ಬಗ್ಗೆ ಪ್ರಧಾನಮಂತ್ರಿಯ ಸ್ಪಷ್ಟನೆ
ನವದೆಹಲಿ, ಡಿ. 21– ಪಂಜಾಬ್– ಹರಿಯಾನ ಪ್ರಶ್ನೆ ಅಥವಾ ಗೋಹತ್ಯಾ ನಿಷೇಧದ ಪ್ರಶ್ನೆಗೆ ಪರಿಹಾರವನ್ನು ಕಂಡುಹಿಡಿಯಲು ಆತ್ಮಾರ್ಪಣೆ ಮತ್ತು ಉಪವಾಸಗಳ ಬೆದರಿಕೆಗಳಿಗೆ ಸರ್ಕಾರವು ಮಣಿಯದೆಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಸ್ಪಷ್ಟಪಡಿಸಿದರು. ಈ ವಿಧವಾದ ವಿಧಾನಗಳ ಅನುಸರಣೆ ನಡೆದಿರುವಾಗ ನಾವು ಜಗ್ಗೆವು ಎಂದೂ ಅವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಪ್ರಧಾನಮಂತ್ರಿಯ ಸ್ಥಾನಕ್ಕೆ ಮತ್ತೆ ಇಂದಿರಾ ಸ್ಪರ್ಧೆ ಸಂಭವ
ನವದೆಹಲಿ, ಡಿ. 21– ಸಾರ್ವತ್ರಿಕ ಚುನಾವಣೆಯ ನಂತರ ಪ್ರಧಾನ ಮಂತ್ರಿಯ ಸ್ಥಾನಕ್ಕೆ ತಾವು ಮತ್ತೆ ಸ್ಪರ್ಧಿಸಬಹುದೆಂದು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಸೂಚಿಸಿದರು.
ಆ ಸ್ಥಾನಕ್ಕೆ ತಾವು ಮತ್ತೆ ಸ್ಪರ್ಧಿಸಬಹುದೆಂದು ಶ್ರೀ ಮುರಾರಜೀಯವರು ತಿಳಿಸಿರುವುದರಿಂದ ನೀವು ಸ್ಪರ್ಧಿಸಲು ಉದ್ದೇಶಿಸಿರುವಿರಾ? ಎಂಬ ಪ್ರಶ್ನೆಗೆ ಉತ್ತರವಾಗಿ ಅವರು ‘ನಾನೂ ಸ್ಪರ್ಧಿಸಬಹುದು’ ಎಂದರು.
ಯೋಜನಾ ಆಯೋಗ ಪುನರ್ರಚನೆ ಪರಿಶೀಲನೆಯಲ್ಲಿ
ನವದೆಹಲಿ, ಡಿ. 21– ಯೋಜನಾ ಆಯೋಗದ ಬಹುಮಂದಿ ಸದಸ್ಯರ ಅಧಿಕಾರಾವಧಿಯು ಸದ್ಯದಲ್ಲೇ ಮುಗಿಯಲಿರುವುದರಿಂದ ಆಯೋಗವನ್ನು ಪನರ್ರಚಿಸುವ ಪ್ರಶ್ನೆಯನ್ನು ಪರಿಶೀಲಿಸಲಾಗುತ್ತಿದೆಯೆಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಇಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ
ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.