ADVERTISEMENT

ಗುರುವಾರ, 26–1–1967

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2017, 19:30 IST
Last Updated 25 ಜನವರಿ 2017, 19:30 IST

ರಾಜ್ಯದ ಸರಕಾರಿ ನೌಕರರಿಗೆ ಮದ್ರಾಸ್‌ ತುಟ್ಟಿಭತ್ಯ
ಬೆಂಗಳೂರು, ಜ. 25– 1967ರ ಜನವರಿ 1ರಿಂದ ರಾಜ್ಯದ ಸರಕಾರಿ ನೌಕರರಿಗೆ ಮದರಾಸ್‌ ರಾಜ್ಯ ಮಟ್ಟದ ತುಟ್ಟಿಭತ್ಯವನ್ನು ನೀಡಲು ಇಂದು ಮಂತ್ರಿಮಂಡಲ ತೀರ್ಮಾನಿಸಿತು.

1 ಸಾವಿರಕ್ಕಿಂತ ಹೆಚ್ಚು ರೂಪಾಯಿ ಸಂಬಳ ಬರುವ ನೌಕರರಿಗೆ 100 ರೂಪಾಯಿ ತುಟ್ಟಿಭತ್ಯ ಪಾವತಿ ಮಾಡಲೂ ನಿರ್ಧಾರ ಕೈಗೊಳ್ಳಲಾಯಿತೆಂದು ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ವರದಿಗಾರರಿಗೆ ತಿಳಿಸಿದರು. ಈ ವರ್ಗದ ನೌಕರರಿಗೆ ತುಟ್ಟಿಭತ್ಯ ನೀಡುವುದು ಇದೇ ಪ್ರಥಮ.

ಎನ್‌.ಜಿ.ಓ.ಗಳ ಬಗ್ಗೆ ಸಹಾನುಭೂತಿ ಇಲ್ಲ ಎಂಬ ಭಾವನೆ ನಿರಾಧಾರ: ಎಸ್ಸೆನ್‌
ಬೆಂಗಳೂರು, ಜ. 25– ನಾನ್‌ ಗೆಜೆಟೆಡ್‌ ನೌಕರರ ಬಗ್ಗೆ ಸರಕಾರಕ್ಕೆ ಸಹಾನುಭೂತಿಯಿಲ್ಲ ಎಂಬ ಭಾವನೆ ‘ಸತ್ಯಕ್ಕೆ ದೂರವಾದುದು’ ಎಂದು ಇಂದು ಇಲ್ಲಿ ಒತ್ತಿ ಹೇಳಿದ ಮುಖ್ಯಮಂತ್ರಿಗಳು ನೌಕರರಿಗೆ ಮದರಾಸ್‌ ಮಟ್ಟದ ತುಟ್ಟಿ ಭತ್ಯ ನೀಡುವ ಪ್ರಶ್ನೆ ಕೆಲವು ಕಾಲದಿಂದ ಸರ್ಕಾರದ ಸಹಾನುಭೂತಿಯುತ ಪರಿಶೀಲನೆಯಲ್ಲಿತ್ತೆಂದು ಸ್ಪಷ್ಟಪಡಿಸಿದರು.

ರಾಜಾ,ಮಿನರ್ವಾ ಮಿಲ್‌ ಪುನರಾರಂಭ
ಬೆಂಗಳೂರು, ಜ. 25– ಕಳೆದ ಹತ್ತು ತಿಂಗಳಿಂದ ಮುಚ್ಚಲಾಗಿದ್ದ ಮಿನರ್ವಾ ಮತ್ತು ರಾಜಾ ಮಿಲ್ಲುಗಳನ್ನು ಫೆಬ್ರವರಿ 10 ರಂದು ಮತ್ತೆ ತೆರೆಯಲಾಗುವುದು ಎಂದು ಕಾರ್ಮಿಕ ಸಚಿವ ಶ್ರೀ ಡಿ. ದೇವರಾಜ್‌ ಅರಸ್‌ ಅವರು ಇಂದು ಪತ್ರಿಕಾಗೋಷ್ಠಿ ಯಲ್ಲಿ ವರದಿಗಾರರಿಗೆ ತಿಳಿಸಿದರು.

ಪಿ.ವಿ.ಆರ್‌. ರಾವ್‌ಗೆ ಪದ್ಮವಿಭೂಷಣ
ದೆಹಲಿ, ಜ. 25– ಕರ್ನಾಟಕ ವಿಶ್ವವಿದ್ಯಾ ನಿಲಯದ ಉಪಕುಲಪತಿ ಶ್ರೀ ಡಿ.ಸಿ. ಪಾವಟೆ ಮತ್ತು ಶ್ರೀ ಬೆನಗಲ್‌ ಶಿವರಾಯ ರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಗಣರಾಜ್ಯೋ ತ್ಸವದ ಸಂದರ್ಭದಲ್ಲಿ ಪ್ರಕಟಿಸಲಾಯಿತು.

ಮಾಜಿ ರಕ್ಷಣಾ ಶಾಖೆ ಕಾರ್ಯದರ್ಶಿ
ಶ್ರೀ ಪಿ.ವಿ.ಆರ್‌. ರಾವ್‌ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರಕಟಿಸ ಲಾಗಿದೆ. ಟ್ರಾಂಬೆಯ ಅಣು ಕೇಂದ್ರದಲ್ಲಿ ಜೀವಶಾಸ್ತ್ರ ಶಾಖೆಯ ಡೈರೆಕ್ಟರಾಗಿರುವ ಡಾ. ಎ.ಆರ್‌. ಗೋಪಾಲ ಅಯ್ಯಂಗಾರ್‌ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.