ಪುರಿ ಶ್ರೀಗಳ ನಿರಶನ ಅಂತ್ಯ
ಪುರಿ, ಜ. 31– ಸರ್ವಪಕ್ಷ ಗೋ ಸಂರಕ್ಷಣಾ ಸಮಿತಿಯ ನಾಯಕರ ಜೊತೆ ಮಾತುಕತೆ ನಡೆಸಿದ ನಂತರ ಪುರಿ ಗೋವರ್ಧನ ಪೀಠದ ಜಗದ್ಗುರು ಶ್ರೀ ಶಂಕರಾಚಾರ್ಯ ಅವರು 73 ದಿನಗಳಿಂದ ನಡೆಸುತ್ತಿದ್ದ ತಮ್ಮ ನಿರಶನವನ್ನು ಇಂದು ಇಲ್ಲಿ ಮಧ್ಯಾಹ್ನ 3 ಗಂಟೆಗೆ ನಿಲ್ಲಿಸಿದರು. ಗಂಗಾಜಲ ಮತ್ತು ಎಳನೀರು ಸೇರಿದ ಚರಣಾಮೃತವನ್ನು ಸೇವಿಸಿ ಜಗದ್ಗುರುಗಳು ತಮ್ಮ ಉಪವಾಸವನ್ನು ಮುಕ್ತಾಯಗೊಳಿಸಿದರು.
ಗೋಹತ್ಯೆ ನಿಷೇಧ ಪ್ರಶ್ನೆ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ನೇಮಕ
ನವದೆಹಲಿ, ಜ. 31– ಗೋ ಹತ್ಯೆಯನ್ನು ನಿಷೇಧಿಸಬೇಕೆಂಬ ಪ್ರಶ್ನೆಯನ್ನು ಪರಿಶೀಲಿಸುವುದಕ್ಕಾಗಿ ಕೇಂದ್ರ ಸರಕಾರವು ಉನ್ನತ ಮಟ್ಟದ ಸಮಿತಿಯೊಂದನ್ನು ನೇಮಕ ಮಾಡುವುದೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಹೇಳಿದರು.
ಪುರಿ ಗೋವರ್ಧನ ಪೀಠದ ಜಗದ್ಗುರು ಶ್ರೀ ಶಂಕರಾಚಾರ್ಯ ಮತ್ತು ಪ್ರಭುದತ್ತ ಬ್ರಹ್ಮಚಾರಿ ಅವರು ಉಪವಾಸ ನಿಲ್ಲಿಸಿರುವುದು, ಈ ಸಮಸ್ಯೆಯನ್ನು ಸಮಿತಿಯು ಶಾಂತವಾಗಿ ಹಾಗೂ ನಿಷ್ಪಕ್ಷಪಾತವಾಗಿ ಪರಿಶೀಲಿಸುವುದಕ್ಕೆ ಮಾರ್ಗ ಮಾಡುತ್ತದೆಂಬ ಆಶಯವನ್ನೂ ಅವರು ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.