ಉತ್ತರ ವಿಯಟ್ನಾಂ ಮೇಲೆ ಮತ್ತೆ ಬಾಂಬ್ ದಾಳಿ ಸಂಭವ
ವಾಷಿಂಗ್ಟನ್, ಜೂ. 18– ಉತ್ತರ ವಿಯಟ್ನಾಂ ಮೇಲೆ ಅನಿರ್ಬಂಧಿತ ಬಾಂಬ್ ದಾಳಿಯನ್ನು ಅಮೆರಿಕ ಪುನಃ ಆರಂಭಿಸಬಹುದು. ಬಾಂಬ್ ದಾಳಿಯನ್ನು ತೀವ್ರಗೊಳಿಸಲು ವಾಷಿಂಗ್ಟನ್ ಹಾಗೂ ಸೈಗಾನಿನ ಮಿಲಿಟರಿ ಸಲಹೆಗಾರರು ಜಾನ್ಸನ್ ಮೇಲೆ ಒತ್ತಡ ತರುತ್ತಿದ್ದಾರೆ.
ಮುಖ್ಯಮಂತ್ರಿಗೆ ಕೊಲೆ ಬೆದರಿಕೆ
ಬೆಂಗಳೂರು, ಜೂನ್ 18– ಮಂತ್ರಿ ಮಂಡಲ ವಿಸ್ತರಿಸಲು ಪ್ರಯತ್ನಿಸಿದರೆ ರಾಬರ್ಟ್ ಕೆನಡಿಗೆ ಒದಗಿದ ಗತಿಗೆ ತುತ್ತಾಗಬೇಕಾದೀತೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರಿಗೆ ಬೆದರಿಕೆ ಪತ್ರವೊಂದು ಬಂದಿದೆ. ಮುಖ್ಯಮಂತ್ರಿಗೆ ಇಂದು ಬಂದಿರುವ ಪತ್ರದಲ್ಲಿ ‘ನಿಮ್ಮ ಪ್ರಾಣ ಅಪಾಯದಲ್ಲಿದೆ. ನಿಮ್ಮನ್ನು ಗುಂಡಿಕ್ಕಿ ಕೊಲ್ಲಲಾಗುತ್ತದೆ’ ಎಂದು ಬೆದರಿಸಲಾಗಿದೆ.
ಶ್ರೀ ಪಾಟೀಲರು ಈ ಪತ್ರವನ್ನು ಚೇಂಬರ್ಸ್ನಲ್ಲಿ ಪತ್ರಕರ್ತರಿಗೆ ತೋರಿಸಿ ತಮಾಷೆಯಾಗಿ ನಕ್ಕು ಅದರ ವಿಚಾರವನ್ನು ತೇಲಿಸಿಬಿಟ್ಟರು. ಮುಖ್ಯಮಂತ್ರಿಗೆ ಬಂದಿರುವ ಇನ್ಲ್ಯಾಂಡ್ ಪತ್ರವನ್ನು ‘ಮಹೇಂದ್ರ’ ತನ್ನ ಹೆಸರೆಂದು ಹೇಳಿಕೊಂಡಿರುವವನು ಬರೆದಿದ್ದಾನೆ.
ಮದ್ರಾಸಿನಂತಹ ರಾಜ್ಯದಲ್ಲಿ ಹತ್ತೇ ಮಂದಿ ಸಚಿವರಿರುವಾಗ ಈಗಾಗಲೇ ಅಗಾಧವಾಗಿರುವ ತಮ್ಮ ಸಂಪುಟವನ್ನು ಇನ್ನಷ್ಟು ವಿಸ್ತರಿಸುವಿರೇಕೆ ಎಂದು ಮುಖ್ಯಮಂತ್ರಿಗೆ ಅವನ ಪ್ರಶ್ನೆ.
‘ಯಾವಾಗ ಎಂಬುದನ್ನು ನಾನು ಹೇಳಲಾರೆ ಸ್ವಲ್ಪ ಕಾಲದಲ್ಲೇ ನಿಮ್ಮನ್ನು ಗುಂಡಿಟ್ಟು ಕೊಲ್ಲಲಾಗುತ್ತದೆ. ನಿಮ್ಮನ್ನು ಕೊಲ್ಲುವೆ, ನಾನು ಸುವರ್ಣ ಅವಕಾಶಕ್ಕಾಗಿ ವೀಕ್ಷಿಸುತ್ತಿದ್ದೇನೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.