ಹುಬ್ಬಳ್ಳಿ ಬಳಿ ಭೀಕರ ರೈಲ್ವೆ ಅಪಘಾತ: ಅನೇಕ ಸಾವು
ಬೆಂಗಳೂರು, ಮಾ. 19– ಹುಬ್ಬಳ್ಳಿಗೆ 45 ಕಿಲೋ ಮೀಟರ್ ದೂರದಲ್ಲಿರುವ ಯಳವಿಗಿ ರೈಲ್ವೆ ನಿಲ್ದಾಣದಲ್ಲಿ ಇಂದು ರಾತ್ರಿ 10.35ರ ಸಮಯದಲ್ಲಿ ಎರಡು ರೈಲುಗಳು ಡಿಕ್ಕಿ ಹೊಡೆದು ಅನೇಕ ಜನರು ಸತ್ತಿದ್ದಾರೆಂದು ಶಂಕಿಸಲಾಗಿದೆ.
ಎಡ ಕಮ್ಯುನಿಸ್ಟರ ಜತೆ ಗುಪ್ತ ನಾಗಾ ಸಂಬಂಧ: ಚವಾಣ್
ನವದೆಹಲಿ, ಮಾ. 19– ಅಸ್ಸಾಂ ಮತ್ತು ನಾಗಾಲ್ಯಾಂಡಿನಲ್ಲಿ ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂಬ ಆಪಾದನೆ ಮೇಲೆ ಬಂಧಿಸಲಾದ ವ್ಯಕ್ತಿಗಳನ್ನು ಪ್ರಶ್ನಿಸಿದಾಗ, ಅವರು ಎಡ ಕಮ್ಯುನಿಸ್ಟ್ ಪಕ್ಷದ ಜತೆ ಸಂಬಂಧವಿಟ್ಟುಕೊಂಡಿದ್ದಾರೆಂಬ ಅಂಶ ಪತ್ತೆಯಾಯಿತು ಎಂದು ಕೇಂದ್ರ ಗೃಹ ಸಚಿವ ಶ್ರೀ ವೈ.ಬಿ. ಚವಾಣ್ ಇಂದು ಲೋಕಸಭೆಯಲ್ಲಿ ತಿಳಿಸಿದರು.
ಗುಪ್ತ ನಾಗಾಗಳು ಉಪಯೋಗಿಸುವ ಅಸ್ತ್ರಗಳು ನಿಸ್ಸಂಶಯವಾಗಿಯೂ ಚೀನದಿಂದ ಬರುತ್ತಿವೆ ಎಂದು ಚವಾಣ್ ತಿಳಿಸಿದರು.
ಗಜನಾಮಕರಣ
ಬೆಂಗಳೂರು, ಮಾ. 19– ಒಂದು ಆನೆಗೆ ‘ಶ್ರೀ ನಿಜಲಿಂಗಪ್ಪ’ ಅಂತ ಹೆಸರು ಕೊಟ್ಟಿರಲ್ಲ ಅದರ ಔಚಿತ್ಯವೇನು?’
‘ಸ್ವಭಾವತಃ ಅದು ಒಳ್ಳೆಯ ಆನೆಯಾಗಿ ಕಾಣುತ್ತಿತ್ತು. ಆದುದರಿಂದ’ ಪ್ರಶ್ನೆ ಕೇಳಿದವರು ವಿರೋಧ ಪಕ್ಷದ ನಾಯಕ ಶ್ರೀ ಎಸ್. ಶಿವಪ್ಪ. ಉತ್ತರ ನೀಡಿದವರು ಅರಣ್ಯ ಸಚಿವ ಶ್ರೀ ಬಿ. ರಾಚಯ್ಯ.
ವಾಪಸು ಬಂದಿತು: ಸ್ವಲ್ಪ ಸಮಯದ ನಂತರ ಆಳುವ ಪಕ್ಷದ ಸದಸ್ಯರೊಬ್ಬರಿಂದ ಅದೇ ಪ್ರಶ್ನೆ ವಾಪಸು ಬಂದಿತು.
ಶ್ರೀ ಅಗ್ನಿಹೋತ್ರಿ: ಒಂದು ಆನೆಗೆ ಎಷ್ಟು ಶಬ್ದ ಮಾಡಿದರೂ ಕೇಳಲಿಲ್ಲ. ಅದಕ್ಕೆ ಶ್ರೀ ಶಿವಪ್ಪ ಅಂತ (ಹೆಸರು) ಇಟ್ಟಿರಾ? (ನಗು)
ಸಚಿವ: ಒಂದು ಆನೆ ಇದೆ, ಬಹಳ ತಂಟೆ ಮಾಡುತ್ತಿದೆ! (ಮತ್ತಷ್ಟು ನಗು)
ಹಿಂದೆ ಕೂಡ ಆನೆಗಳಿಗೆ ಹೆಸರಿಡುವ ಪದ್ಧತಿ ಇತ್ತೆಂದು ಸಚಿವರು ಶ್ರೀ ಎಚ್. ಸಿದ್ಧವೀರಪ್ಪನವರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.