ADVERTISEMENT

ಬುಧವಾರ, 28–6–1967

​ಪ್ರಜಾವಾಣಿ ವಾರ್ತೆ
Published 27 ಜೂನ್ 2017, 19:30 IST
Last Updated 27 ಜೂನ್ 2017, 19:30 IST

* ಚವಾಣ್ ಹೇಳಿಕೆಗೆ ವಿರೋಧ ಪಕ್ಷಗಳ ಪ್ರತಿಭಟನೆ
ನವದೆಹಲಿ, ಜೂ. 27– ಇತ್ತೀಚೆಗೆ ಪಾರ್ಲಿಮೆಂಟಿನ ಕಾಂಗ್ರೆಸ್ ಸದಸ್ಯರಲ್ಲೊಬ್ಬರಾದ ಶ್ರೀ ಬಿ.ಕೆ. ಘೋಷ್ ಅವರು ತೊಟ್ಟಿದ್ದ ಬಟ್ಟೆಗಳನ್ನು ಕಿತ್ತು ಬೆತ್ತಲೆಯಾದ ಅವರನ್ನು ಅವರ ಮತ ಕ್ಷೇತ್ರವಾದ ಸರಾಂಪುರದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತೆಂದು ಕೇಂದ್ರ ಗೃಹಮಂತ್ರಿ ಶ್ರೀ ವೈ.ಬಿ. ಚವಾಣ್ ಅವರು ಇಂದು ತಿಳಿಸಿದಾಗ ಲೋಕಸಭೆಯಲ್ಲಿ ಕೋಲಾಹಲವುಂಟಾಯಿತು.

ಕಾಂಗ್ರೆಸ್ ಸದಸ್ಯರು ‘ನಾಚಿಕೆಕೇಡು’ ಎಂದು ಕೂಗಿದರು. ಅಧಿಕಾರದಲ್ಲಿರುವ ಒಂದು ಪಕ್ಷದ ರಾಜಕೀಯ ವಿರೋಧಿಗಳ ಬಗ್ಗೆ ಇಂಥ ವರ್ತನೆಯನ್ನು ಎಲ್ಲರೂ ಖಂಡಿಸಬೇಕೆಂದು ಚವಾಣ್ ಹೇಳಿದಾಗ ವಿರೋಧ ಪಕ್ಷಗಳ ಸದಸ್ಯರು ಗಲಾಟೆ ಮಾಡಿದರು.

* ಹಾರಂಗಿ, ಹೇಮಾವತಿ ಯೋಜನೆಗಳಿಗೆ ಇನ್ನೂ ಒಪ್ಪಿಗೆ ದೊರೆತಿಲ್ಲ
ಬೆಂಗಳೂರು, ಜೂನ್ 27– ಹಾರಂಗಿ ಮತ್ತು ಹೇಮಾವತಿ ಯೋಜನೆಗಳಿಗೆ ಯೋಜನಾ ಆಯೋಗದ ಅನುಮತಿ ಇನ್ನೂ ದೊರೆತಿಲ್ಲವೆಂದೂ ಆದರೂ ಸರಕಾರ ಈಗಾಗಲೇ ಎರಡು ಕೋಟಿ ರೂ.ಗಳಿಗೂ ಹೆಚ್ಚಿನ ಮೊಬಲಗಿನ ಕೆಲಸಗಳಿಗೆ ಟೆಂಡರು ಕರೆದು ಕೆಲಸ ಪ್ರಾರಂಭಿಸಿದೆಯೆಂದೂ ಲೋಕೋಪಯೋಗಿ ಸಚಿವ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.

ADVERTISEMENT

* ರಾಜಕೀಯ ವ್ಯಭಿಚಾರ
ಬೆಂಗಳೂರು, ಜೂ. 27–
‘ರಾಜ್ಯದ ಬೊಕ್ಕಸದ ಹಣವನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿ, ರಾಜಕೀಯ ವ್ಯಭಿಚಾರಕ್ಕೆ ಉಪಯೋಗಿಸಬೇಡಿ’.

ಬಜೆಟಿನ ಮೇಲಿನ ಚರ್ಚೆಯ ವೇಳೆ ಸರ್ಕಾರಕ್ಕೆ ವಿರೋಧ ಪಕ್ಷಗಳ ನಾಯಕ ಶ್ರೀ ಶಿವಪ್ಪ ಅವರ ಸಲಹೆ. ಸರ್ಕಾರದ ಹಣವನ್ನು, ವಿರೋಧ ಪಕ್ಷಗಳ ಸದಸ್ಯರನ್ನು ಆಳುವ ಪಕ್ಷಕ್ಕೆ ಆಕರ್ಷಿಸಲು ಬಳಸಬೇಡಿ ಎಂಬುದರ ಅಪ್ರತ್ಯಕ್ಷ ಪ್ರಸ್ತಾಪ.

‘ರಾಜಕೀಯ ವ್ಯಭಿಚಾರ ಮಾಡಿಲ್ಲ, ಮಾಡುವುದಿಲ್ಲ, ಮಾಡುವವರು ನಾವಲ್ಲ’ ತಟ್ಟನೆ ಉತ್ತರ ಬಂತು ಮುಖ್ಯಮಂತ್ರಿಗಳಿಂದ.

* ಕುದುರೆಮುಖದಲ್ಲಿ ಅದುರು ತೆಗೆಯಲು ಭಾರಿ ಯೋಜನೆ
ಟೋಕಿಯೊ, ಜೂ. 27–
ಪ್ರಮುಖವಾಗಿ ಜಪಾನಿಗೆ ರಫ್ತು ಮಾಡಲು ಮೈಸೂರು ರಾಜ್ಯದಲ್ಲಿರುವ ಕುದುರೇ ಮುಖದಲ್ಲಿ ಹೇರಳವಾಗಿರುವ ಕಬ್ಬಿಣದ ಆದುರು ನಿಕ್ಷೇಪವನ್ನು ಹೊರತೆಗೆಯಲು 10 ಕೋಟಿ ಡಾಲರ್ (82.5 ಕೋಟಿ ರೂ.) ಯೋಜನೆಯೊಂದು ಸಿದ್ಧವಾಗುತ್ತಿರುವುದಾಗಿ ಜಪಾನ್ ಸಂಸ್ಥೆಯೊಂದರ ವಕ್ತಾರರು ಇಂದು ಇಲ್ಲಿ  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.