ನಾಯಕ್ ರಾಜಿನಾಮೆಗೆ ಒತ್ತಾಯ
ನಾಗಪುರ, ನ. 7– ಸಂಪೂರ್ಣ ಮಹಾರಾಷ್ಟ್ರ ಸಮಿತಿಯ ಸದಸ್ಯರ ಕೂಗಾಟ– ಅಡಚಣೆ ತಂತ್ರಗಳಿಂದ, ಇಲ್ಲಿ ಆರಂಭವಾದ ಮಹಾರಾಷ್ಟ್ರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಯಾವುದೇ ಕಾರ್ಯಕಲಾಪವೂ ನಡೆಯುವುದು ಸಾಧ್ಯವಾಗದೆ ಸಭೆಯನ್ನು ಮುಂದೂಡಬೇಕಾಯಿತು.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವಿ.ಪಿ. ನಾಯಕ್ರವರು ಆಸನಾರೂಢರಾಗುತ್ತಿದ್ದಂತೆ ಮಹಾರಾಷ್ಟ್ರ ಸಮಿತಿಯ ಡಾ. ಸಾಮಂತ್ರವರು ಎದ್ದುನಿಂತು, ನಾಯಕ್ರವರ ನಾಯಕತ್ವದಲ್ಲಿರುವ ಕಾಂಗ್ರೆಸ್ ಸರ್ಕಾರವು ರಾಜಿನಾಮೆ ನೀಡಬೇಕೆಂದು ಒತ್ತಾಯಪಡಿಸಿದರು.
ರಾಷ್ಟ್ರಗಳನ್ನು ನಾಶಪಡಿಸಬಲ್ಲ ಕ್ಷಿಪಣಿ: ರಷ್ಯದಲ್ಲಿ ಪ್ರದರ್ಶನ
ಮಾಸ್ಕೊ, ನ. 7– ಬೊಲ್ಷೇವಿಕ್ ಕ್ರಾಂತಿಯ 50ನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ಕೆಂಪುಚೌಕದಲ್ಲಿ ನಡೆದ ಭಾರಿ ಪೆರೇಡ್ನಲ್ಲಿ ರಷ್ಯವು ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಿತು.
1917ರ ನವೆಂಬರ್ 7 ರಂದು ಜನ್ಮ ತಳೆದ ರಷ್ಯವನ್ನು ಅನುಮಾನ ದೃಷ್ಟಿಯಿಂದ ನೋಡಿದ ಬಂಡವಾಳಶಾಹಿ ರಾಷ್ಟ್ರಗಳನ್ನು ನಾಶಪಡಿಸುವ ಸಾಮರ್ಥ್ಯ ಇಂದು ಪ್ರದರ್ಶಿಸಲಾದ ನಿರ್ದೇಶಿತ ಕ್ಷಿಪಣಿಗಳಿಗಿವೆಯೆಂದು ರಷ್ಯ ತಿಳಿಸಿದೆ. ಭೂಮಿಯ ಮೇಲಿರುವ ಯಾವ ಸ್ಥಳಕ್ಕಾದರೂ ಈ ಕ್ಷಿಪಣಿಗಳು ಜಲಜನಕ ಬಾಂಬ್ ಸಿಡಿತಲೆಗಳನ್ನು ಒಯ್ಯಬಲ್ಲವು.
‘ಪ್ರಶಸ್ತಿ ಬೇಡ ಸಂಸ್ಥೆಗೆ ಹಣ, ಭೂಮಿ ಕೊಡಿ’
ಬೆಂಗಳೂರು, ನ. 7– ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಶ್ರೀ ರಾಘವೇಂದ್ರಸ್ವಾಮಿಗಳು ಸರ್ಕಾರ ನೀಡಬೇಕೆಂದಿರುವ ರಾಜ್ಯ ಪ್ರಶಸ್ತಿಯನ್ನು 3ನೇ ಬಾರಿಗೆ ‘ನಮ್ರತೆಯಿಂದ ನಿರಾಕರಿಸಿ’ ಅದಕ್ಕೆ ಬದಲಾಗಿ ಮಲ್ಲಾಡಿಹಳ್ಳಿಯ ವಿದ್ಯಾಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳಿಗಾಗಿ ಹಣ ಸಹಾಯ ಹಾಗೂ ಜಮೀನನ್ನು ಕೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.