ಕಲ್ಕತ್ತದಷ್ಟೇ ಪ್ರಮುಖ ಬಂದರಾಗಿ ಮಂಗಳೂರು- ನಿರ್ಮಾಣ ಖಚಿತವೆಂದು ಸಚಿವ ಡಾ. ರಾವ್; ಎರಡು ಹಂತಗಳಲ್ಲಿ ಅಭಿವೃದ್ಧಿ
(ನಾರಾಯಣಸ್ವಾಮಿ ಅವರಿಂದ)
ನವದೆಹಲಿ, ಸೆ. 23– ಏನೇ ಆದರೂ ಮಂಗಳೂರು ಬಂದರು ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರದ ಸಾರಿಗೆ ಮತ್ತು ನೌಕಾ ಸಾರಿಗೆ ಸಚಿವ ಡಾ. ವಿ.ಕೆ.ಆರ್. ರಾವ್ ಅವರು ಇಂದು ಇಲ್ಲಿ ತಿಳಿಸಿದರು.
ಮದ್ರಾಸಿಗಿಂತ ಹೆಚ್ಚು ಮುಖ್ಯವಾದ ಮತ್ತು ಕಲ್ಕತ್ತದಷ್ಟೇ ಪ್ರಧಾನವಾದ ಬಂದರನ್ನಾಗಿ ಮಂಗಳೂರನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆಯೆಂದೂ ಅವರು ತಿಳಿಸಿದರು.
ಕಾಲೇಜಿನಲ್ಲಿ ಕನ್ನಡ–ಇಂಗ್ಲಿಷ್ ಕಲಿಯಲು ವಿಶೇಷ ವಿದ್ಯಾರ್ಥಿ ವೇತನ
ಬೆಂಗಳೂರು, ಸೆ. 23– ಬಿ.ಎ. ತರಗತಿಯಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಯನ್ನು ಮುಖ್ಯ ವಿಷಯವಾಗಿ ತೆಗೆದುಕೊಂಡು ಅಧ್ಯಯನ ಮಾಡುವುದನ್ನು ಪ್ರೋತ್ಸಾಹಿಸಲು ರಾಜ್ಯ ಸರಕಾರವು ವಿಶೇಷ ವಿದ್ಯಾರ್ಥಿ ವೇತನಗಳನ್ನು ನೀಡಲು ನಿರ್ಧರಿಸಿದೆ.
ಮೂರು ವಿಶ್ವವಿದ್ಯಾನಿಲಯಗಳಿಂದ ಕನ್ನಡ ಮತ್ತು ಇಂಗ್ಲೀಷ್ಗೆ ತಲಾ ಹತ್ತು ವಿದ್ಯಾರ್ಥಿ ವೇತನಗಳನ್ನು ಸಧ್ಯಕ್ಕೆ ನೀಡಲಾಗುವುದೆಂದು ರಾಜ್ಯ ಸರಕಾರದ ವಕ್ತಾರರೊಬ್ಬರು ಇಂದು ವರದಿಗಾರರಿಗೆ ತಿಳಿಸಿದರು.
ಮುಸುಕಿನ ಜೋಳ–ಗೋಧಿಹಿಟ್ಟು ಬೆರಸಿ ಬ್ರೆಡ್: ಕೇಂದ್ರದ ಒಪ್ಪಿಗೆ ಕೇಳುವುದಾಗಿ ಜತ್ತಿ
ಬೆಂಗಳೂರು, ಸೆ. 23– ಮುಸುಕಿನ ಜೋಳದ ಹಿಟ್ಟು ಹಾಗೂ ಗೋಧಿಹಿಟ್ಟನ್ನು ಮಿಶ್ರ ಮಾಡಿ ಬ್ರೆಡ್ ತಯಾರಿಸಲು ಕೇಂದ್ರ ಸರ್ಕಾರದ ಅನುಮತಿಯನ್ನು ಕೇಳಲಾಗುವುದೆಂದು ಸಚಿವ ಶ್ರೀ ಬಿ.ಡಿ. ಜತ್ತಿ ಅವರು ಇಂದು ಇಲ್ಲಿ ತಿಳಿಸಿದರು.
ಮುಸುಕಿನ ಜೋಳವನ್ನು ಹಿಟ್ಟು ಮಾಡಲು ಈಗ ಗಿರಣಿಗಳಿಗೆ ಅವಕಾಶವಿಲ್ಲದಿರುವುದರಿಂದ, ಹಿಟ್ಟು ಮಾಡಲು ಒಂದು ಗಿರಣಿಗಾದರೂ ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರದ ಆಹಾರ ಸಚಿವರನ್ನು ಒತ್ತಾಯಪಡಿಸುವುದಾಗಿ ಸಚಿವ ಶ್ರೀ ಜತ್ತಿ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.