ADVERTISEMENT

ಭಾನುವಾರ 9–7–1967

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 19:30 IST
Last Updated 8 ಜುಲೈ 2017, 19:30 IST

ಆಹಾರಧಾನ್ಯಕ್ಕೆ ಸಬ್ಸಿಡಿ ಅಸಾಧ್ಯ; ಶ್ರೀ ಜತ್ತಿ:
ರಾಜ್ಯವು ಹಣಕಾಸಿನ ಸಮಸ್ಯೆ ಎದುರಿಸುತ್ತಿರುವುದರಿಂದ ಆಹಾರಧಾನ್ಯಗಳಿಗೆ ಸಬ್ಸಿಡಿ ನೀಡಲು ಸಾಧ್ಯವಿಲ್ಲ ಎಂದು ಆಹಾರ ಸಚಿವ ಶ್ರೀ ಜತ್ತಿ ಅವರು ತಿಳಿಸಿದ್ದಾರೆ.

ವಿಧಾನಸಭೆಯಲ್ಲಿಂದು ರಾಜ್ಯದ ಆಹಾರಧಾನ್ಯ ಸಮಸ್ಯೆ ಬಗ್ಗೆ ಪ್ರತಿಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ‘ರಾಜ್ಯದ ಯಾವ ಪಟ್ಟಣದಲ್ಲೂ ಸಬ್ಸಿಡಿ ದರದಲ್ಲಿ ಆಹಾರಧಾನ್ಯ ಪೂರೈಸುವುದಿಲ್ಲ. ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 1,170ಪಡಿತರ ವಿತರಣಾ ಅಂಗಡಿಗಳಿವೆ.

ಕೆಲವು ಕಡೆ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈಗಾಗಲೇ ಕೆಲವು ಅಂಗಡಿಗಳ ಪರವಾನಗಿ ರದ್ದುಪಡಿಸಲಾಗಿದೆ. ಅಂಥ ಸ್ಥಳಗಳಲ್ಲಿ ಹೊಸಬರಿಗೆ ಪರವಾನಗಿ ನೀಡಲಾಗುವುದು’ ಎಂದು ಸಚಿವರು ತಿಳಿಸಿದರು.

ADVERTISEMENT

ಚಳುವಳಿಗಾರರ ವಿರುದ್ಧ  ಕ್ರಮಕ್ಕೆ ಪೊಲೀಸರಿಗೆ ಅಧಿಕಾರ
ನವದೆಹಲಿ, ಜುಲೈ 8–
ಅಶ್ರುವಾಯು ಶೆಲ್‌ ಸಿಡಿಸುವುದು, ಲಾಠಿ ಚಾರ್ಜ್‌ ಅಥವಾ ಗುಂಡು ಹಾರಿಸುವುದು ಸೇರಿದಂತೆ ನಕ್ಸಲ್‌ಬರಿಯಲ್ಲಿ ಚೀನಾ ಪರ ಚಳುವಳಿಗಾರರ ವಿರುದ್ಧ ಯಾವ ಕ್ರಮ ಬೇಕಾದರೂ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರವನ್ನು ಪೊಲೀಸರಿಗೆ ಪಶ್ಚಿಮ ಬಂಗಾಳ ಸರ್ಕಾರ ನೀಡಿದೆ.
ನಕ್ಸಲ್‌ಬರಿ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ಶ್ರೀ ಅಜಯ್‌ ಮುಖರ್ಜಿ ನೀಡಿರುವ ಲಿಖಿತ ಹೇಳಿಕೆಯಲ್ಲಿ ಈ ವಿಚಾರ ಸ್ಪಷ್ಟಪಡಿಸಲಾಗಿದೆ.

ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ, ಆದರೆ ಅದನ್ನು ಎಚ್ಚರಿಕೆಯಿಂದ ಬಳಸುವಂತೆಯೂ ಸೂಚಿಸಲಾಗಿದೆ. ಜನರಿಗೆ ಹೆಚ್ಚಿನ ಹಾನಿ ಆಗಬಾರದು, ಆಸ್ತಿಪಾಸ್ತಿ ನಷ್ಟವಾಗದಂತೆ ನೋಡಿಕೊಳ್ಳಬೇಕು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಬಾರದು, ಲೂಟಿಗೆ ಇಳಿಯಬಾರದು ಎಂದು ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ ಎಂದೂ ಮುಖ್ಯಮಂತ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.