* ನಗರದ ಮೂಲಕ ಸಿಂಹಳಕ್ಕೆ ಪ್ರಧಾನಿ: ಸೌಹಾರ್ದ ಭೇಟಿ
ಬೆಂಗಳೂರು, ಸೆ. 18– ನಾಲ್ಕು ದಿನ ಸೌಹಾರ್ದ ಭೇಟಿಗಾಗಿ ಇಂದು ದೆಹಲಿಯಿಂದ ಸಿಂಹಳಕ್ಕೆ ಪ್ರಯಾಣ ಮಾಡಿದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ನಗರದ ವಿಮಾನ ನಿಲ್ದಾಣದಲ್ಲಿ ಸುಮಾರು 20 ನಿಮಿಷಗಳ ಕಾಲ ತಂಗಿದ್ದರು.
‘ಸೌಹಾರ್ದ ಭೇಟಿಗಾಗಿ ನಾನು ಸಿಂಹಳಕ್ಕೆ ಹೋಗುತ್ತಿದ್ದೇನೆ. ಎರಡು ರಾಷ್ಟ್ರಗಳ ನಡುವೆ ಇರುವ ಪ್ರಶ್ನೆಗಳ ಬಗ್ಗೆ ಅಧಿಕೃತ ಮಟ್ಟದಲ್ಲಿ ಮಾತುಕತೆಯೇನೂ ನಡೆಯುವುದಿಲ್ಲ’ ಎಂದು ಪ್ರಧಾನಿ ವಿಮಾನ ನಿಲ್ದಾಣದಲ್ಲಿ ವರದಿಗಾರರಿಗೆ ತಿಳಿಸಿದರು.
* ಭಾರತ– ಸಿಂಹಳ ಮೈತ್ರಿ ವೃದ್ಧಿಗೊಳ್ಳುವ ಆಶಯ
ಕೊಲಂಬೊ, ಸೆ. 18– ಸಿಂಹಳದ ಪ್ರಧಾನಮಂತ್ರಿ ಹಾಗೂ ಇತರ ನಾಯಕರ ಜೊತೆ ತಾವು ನಡೆಸುವ ಮಾತುಕತೆಗಳಿಂದ ಭಾರತ ಮತ್ತು ಸಿಂಹಳಗಳ ನಡುವಣ ಅರಿವು ಮತ್ತು ಸಹಕಾರದ ವ್ಯಾಪ್ತಿ ಮತ್ತಷ್ಟು ವಿಸ್ತೃತಗೊಳ್ಳುವುದೆಂದು ತಾವು ಆಶಿಸುವುದಾಗಿ ಭಾರತದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಹೇಳಿದರು.
* ಶೀಘ್ರವಾಗಿ ಗಡಿ ಆಯೋಗದ ವರದಿ ರವಾನೆಗೆ ಪ್ರಧಾನಿ ಒಪ್ಪಿಗೆ
ಬೆಂಗಳೂರು, ಸೆ. 18– ಗಡಿ ವಿವಾದದ ಕುರಿತ ಮಹಾಜನ್ ಆಯೋಗದ ವರದಿಯನ್ನು ಕೇಂದ್ರ ಮಂತ್ರಿಮಂಡಲ ಯಾವಾಗ ಪರಿಶೀಲಿಸುವುದೆಂಬುದನ್ನು ಹೇಳಲು ಸಾಧ್ಯವಿಲ್ಲವೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.
‘ಪ್ರತಿಯೊಬ್ಬರೂ (ಸಚಿವರು) ಈಗ ದೆಹಲಿಯಿಂದ ಹೊರಗಡೆ ಇದ್ದಾರೆ’ ಎಂದೂ ಪ್ರಧಾನಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.