ADVERTISEMENT

ಮಂಗಳವಾರ, 25–04–1967

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST

ಈಶಾನ್ಯ ಮುಂಬೈ ಕ್ಷೇತ್ರದ ಉಪಚುನಾವಣೆ: ಕೃಷ್ಣಮೆನನ್‌ಗೆ ಮತ್ತೆ ಸೋಲು
ಮುಂಬೈ, ಏ. 24–
ಈಶಾನ್ಯ ಮುಂಬೈ ಕ್ಷೇತ್ರದಿಂದ ಲೋಕಸಭೆಗೆ ನಿನ್ನೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ತಾರಾ ಗೋವಿಂದ ಸಪ್ರೆಯವರು ಜಯ ಗಳಿಸಿದ್ದಾರೆಂದು ಇಂದು ಇಲ್ಲಿ ಅಧಿಕೃತವಾಗಿ ಘೋಷಿಸಲಾಯಿತು.

ಸೋಮವಾರ ಸಂಜೆ 7.15 ಗಂಟೆಗೆ ಮತಗಳ ಎಣಿಕೆ ಮುಗಿದಾಗ ಶ್ರೀಮತಿ ಸಪ್ರೆ ಯವರು ತಮ್ಮ ಸಮೀಪ ಸ್ಪರ್ಧಿ ಶ್ರೀ ವಿ.ಕೆ. ಕೃಷ್ಣಮೆನನ್‌ರವರಿಗಿಂತ 15,056 ಮತಗಳು ಹೆಚ್ಚು ಗಳಿಸಿದ್ದರೆಂದು ಪ್ರಕಟಿಸಲಾಯಿತು.

ಧರೆಗಿಳಿಯುವ ಮುನ್ನವೇ ರಷ್ಯದ ಅಂತರಿಕ್ಷ ಯಾತ್ರಿ ಕೊಮರೋವ್ ಸಾವು
ಮಾಸ್ಕೋ, ಏ. 24–
ರಷ್ಯದ ಅಂತರಿಕ್ಷ ನೌಕೆ ‘ಸೋಯಜ್–1’ ಇಂದು ಧರೆಗೆ ಇಳಿಯುವ ಮುನ್ನ ಅದರಲ್ಲಿದ್ದ ಗಗನ ಯಾತ್ರಿ ವ್ಲಾಡಿಮಿರ್ ಕೊಮರೋವ್ ಅವರು ಸಾವಿಗೀಡಾದರು ಎಂದು ಮಾಸ್ಕೋ ರೇಡಿಯೋ ವರದಿ ಮಾಡಿದೆ.

ರಾಜಸ್ತಾನ್ ಶಾಸಕರ ಬೆಂಬಲದ ವಿಚಾರದಲ್ಲಿ ಮತ್ತೆ ತೀವ್ರ ವಿವಾದ
ಜಯಪುರ, ಏ. 24–
ರಾಜಸ್ತಾನ್ ವಿಧಾನಸಭೆಯ 182 ಮಂದಿ ಪರಿಣಾಮಕಾರಿ ಸದಸ್ಯರಲ್ಲಿ 13 ಮಂದಿಯ ಒಲವು ಯಾರಿಗೆ ಅನ್ನುವ ವಿಚಾರದಲ್ಲಿ ವಿವಾದವುಂಟಾಗಿದ್ದು ಅವರ ಬೆಂಬಲ ತಮಗಿದೆಯೆಂದು ಸಂಯುಕ್ತ ದಳವೂ, ತಮಗೇ ಖಚಿತವೆಂದು ಕಾಂಗ್ರೆಸ್ ಪಕ್ಷವು ಪ್ರತಿಪಾದಿಸುತ್ತಿದೆ.
ಶಿಕ್ಷಣ ಮಾಧ್ಯಮವಾಗಿ

ಪ್ರಾದೇಶಿಕ ಭಾಷೆ: ಸಮಿತಿ ಸಮ್ಮತಿ
ನವದೆಹಲಿ, ಏ. 24
– ರಾಷ್ಟ್ರದಲ್ಲಿ ಎಲ್ಲ ಮಟ್ಟದಲ್ಲೂ ಶಿಕ್ಷಣ ಮಾಧ್ಯಮವು ಪ್ರಾದೇಶಿಕ ಭಾಷೆಗಳಾಗಿರಬೇಕೆಂಬುದನ್ನು ಶಿಕ್ಷಣ ಕುರಿತ ಪಾರ್ಲಿಮೆಂಟ್ ಸದಸ್ಯರ ಸಮಿತಿಯು ಇಂದು ಸರ್ವಾನುಮತದಿಂದ ಒಪ್ಪಿತು. ಶಿಕ್ಷಣ ಆಯೋಗದ ವರದಿಯನ್ನು ಕಾರ್ಯರೂಪಕ್ಕೆ ತರುವುದಕ್ಕೆ ಕ್ರಮಗಳನ್ನು ಸೂಚಿಸುವುದಕ್ಕಾಗಿ ಈ ಸಮಿತಿಯನ್ನು ರಚಿಸಲಾಗಿದೆ.

‘ರಾಷ್ಟ್ರ ವಿರೋಧಿ’ ಕೃತ್ಯ
ಹೈದರಾಬಾದ್, ಏ. 24– 
ಇನ್ನು ಎರಡು ವರ್ಷಗಳ ಕಾಲ ಮಕ್ಕಳೇ ಹುಟ್ಟಬಾರದು– ಕೇಂದ್ರ ಆರೋಗ್ಯ ಮತ್ತು ಕುಟುಂಬ ಯೋಜನಾ ಸಚಿವ ಡಾ. ಎಸ್. ಚಂದ್ರಶೇಖರ್ ಅವರು ಹೊಸದಾಗಿ ಮದುವೆಯಾದ ದಂಪತಿಗಳಿಗೆ ಮಾಡಿ ಕೊಂಡಿರುವ ಮನವಿಯಿದು.

ಮೂರು ಮಕ್ಕಳಿಗಿಂತ ಹೆಚ್ಚಾದರೆ ಅದನ್ನು ‘ರಾಷ್ಟ್ರ ವಿರೋಧಿ’ ಕೆಲಸವೆಂದು ಪರಿಗಣಿಸಬೇಕೆಂದು ಅವರು ತಿಳಿಸಿದರು. ಡಾ. ಚಂದ್ರಶೇಖರ್ ಅವರು ಇಂದು ಇಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.