ರಾಜ್ಯಪಾಲರ ಹೊಣೆ ಈಗ ಹೆಚ್ಚಿದೆ ಎಂದು ಇಂದಿರಾ
ನವದೆಹಲಿ, ನ. 10– ನಾನಾ ರಾಜಕೀಯ ಪಕ್ಷಗಳು ಮತ್ತು ಸಮ್ಮಿಶ್ರ ತಂಡಗಳು ಅಧಿಕಾರದಲ್ಲಿರುವ ಕಾರಣ ರಾಜ್ಯಪಾಲರ ಜವಾಬ್ದಾರಿಯು ಈಗ ಮೊದಲಿಗಿಂತ ಹೆಚ್ಚಿದೆಯೆಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಹೇಳಿದರು.
ಈಗ ನಾವು ಮಾಡುವ ಹಾಗೂ ಮಾಡದಿರುವ ವಿಷಯಗಳೇ ಭವಿಷ್ಯವನ್ನು ರೂಪಿಸಿ ಪೂರ್ವ ನಿದರ್ಶನಗಳು ಹಾಗೂ ಸಂಪ್ರದಾಯಗಳಾಗಿ ಸ್ವೀಕೃತವಾಗುವುವು. ನಿಮ್ಮಲ್ಲನೇಕರು ವಿನೂತನ ಪರಿಸ್ಥಿತಿಗಳನ್ನು ಎದುರಿಸುತ್ತಿರಬಹುದು. ಇಲ್ಲ ಎದುರಿಸಬೇಕಾಗಿ ಬರಬಹುದು. ಅಂತಹ ಪರಿಸ್ಥಿತಿಯನ್ನೆದುರಿಸಲು ನಿಮ್ಮ ಎಲ್ಲ ತಾಳ್ಮೆ, ಅನುಭವ ಮತ್ತು ನಿರ್ಣಾಯಕ ಶಕ್ತಿ ಅಗತ್ಯವಾಗುತ್ತದೆ ಎಂದು ಶ್ರೀಮತಿ ಗಾಂಧಿ ನುಡಿದರು.
ಮೈಸೂರು–ಮಹಾರಾಷ್ಟ್ರ ಗಡಿ ಜನರಿಗೆ ನ್ಯಾಯಬೇಕು –ನಾಯಕ್
ನಾಗಪುರ, ನ. 10– ‘ಮೈಸೂರು ಮತ್ತು ಮಹಾರಾಷ್ಟ್ರ ಗಡಿ ಪ್ರದೇಶಗಳಲ್ಲಿರುವ ಜನರಿಗೆ ನ್ಯಾಯ ದೊರಕಿಸಿಕೊಡಿ. ಇನ್ನು ಹೆಚ್ಚು ವಿಳಂಬ ಮಾಡದೆ ಈ ದೀರ್ಘಕಾಲದ ಗಡಿ ವಿವಾದವನ್ನು ನ್ಯಾಯ ಸಮ್ಮತವಾದ ಹಾಗೂ ಶಾಸ್ತ್ರೀಯವಾದ ಆಧಾರಗಳ ಮೇಲೆ ಇತ್ಯರ್ಥಮಾಡಿರಿ’
–ಇದು ಕೇಂದ್ರ ಸರ್ಕಾರಕ್ಕೂ ಸಂಸತ್ತಿಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ವಿ.ಪಿ. ನಾಯಕ್ ಅವರು ಇಂದು ಮಾಡಿದ ಒತ್ತಾಯ. ಮಹಾಜನ್ ಆಯೋಗದ ವರದಿಯನ್ನು ತಿರಸ್ಕರಿಸುವ ನಿರ್ಣಯವನ್ನು ರಾಜ್ಯ ವಿಧಾನಸಭೆಯಲ್ಲಿ ಅವರು ಮಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.