ADVERTISEMENT

ಶನಿವಾರ 31–12–1966

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2016, 19:46 IST
Last Updated 30 ಡಿಸೆಂಬರ್ 2016, 19:46 IST

ವಿಯಟ್ನಾಂ ಯುದ್ಧ ನಿಲ್ಲಿಸಿ: ಸಹಕಾರದ ನವಯುಗ ಆರಂಭವಾಗಲಿ- ವಿಶ್ವಕ್ಕೆ ಉಥಾಂಟ್‌ರ ಹೊಸ ವರ್ಷದ ಸಂದೇಶ
ವಿಶ್ವರಾಷ್ಟ್ರಸಂಸ್ಥೆ, ಡಿ. 30– 
ವಿಶ್ವದ ರಾಷ್ಟ್ರಗಳ ನಡುವೆ ಸಹಕಾರದ ಹೊಸ ಯುಗವೊಂದನ್ನು ಆರಂಭಿಸಲು ವಿಯೆಟ್ನಾಂನಲ್ಲಿನ ಯುದ್ಧವನ್ನು ಬೇಗನೆ ಕೊನೆಗಾಣಿಸಬೇಕೆಂದು ವಿಶ್ವ ರಾಷ್ಟ್ರಸಂಸ್ಥೆಯ ಪ್ರಧಾನ ಕಾರ್‍ಯದರ್ಶಿ ಉಥಾಂಟ್‌ ಇಂದು ರಾತ್ರಿ ಕರೆ ನೀಡಿದ್ದಾರೆ.

ಸುಖಾಡಿಯ ಅವರಿಂದ ‘ಆಡಳಿತದಲ್ಲಿ ಹಸ್ತಕ್ಷೇಪ ಮತ್ತು ಸ್ವಜನಪಕ್ಷಪಾತ’
ಜಯಪುರ, ಡಿ. 30–
ರಾಜಸ್ತಾನದ ಮುಖ್ಯಮಂತ್ರಿ ಶ್ರೀ ಮೋಹನಲಾಲ್‌ ಸುಖಾಡಿಯರವರು ಆಡಳಿತದಲ್ಲಿ ಯೋಗ್ಯವಲ್ಲದ ರೀತಿಯಲ್ಲಿ ಕೈ ಹಾಕುತ್ತಿರುವರೆಂದೂ, ಸ್ವಜನ ಪಕ್ಷಪಾತದಿಂದಲೂ, ಕಾಂಗ್ರೆಸ್‌ ನೀತಿಗಳಿಗೆ ವಿರುದ್ಧವಾಗಿಯೂ ವರ್ತಿಸುತ್ತಿರುವರೆಂದೂ ಸೆಪ್ಟೆಂಬರ್‌ 20ರಂದು ರಾಜೀನಾಮೆ ನೀಡಿದ ರಾಜ್ಯದ ಮೂವರು ಸಚಿವರು ಆಪಾದಿಸಿದ್ದಾರೆ.

ಗಿರಿ ಜಿಲ್ಲೆಗಳ ಪ್ರತ್ಯೇಕ ರಾಜ್ಯ ರಚನೆ ಖಚಿತ?
ನವದೆಹಲಿ, ಡಿ. 30–
ಅಸ್ಸಾಮಿನ ಗಿರಿ ಜಿಲ್ಲೆಗಳನ್ನೊಳಗೊಂಡ ನೂತನ ರಾಜ್ಯವೊಂದನ್ನು ರಚಿಸುವುದು ಅನಿವಾರ್ಯವೆಂಬ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿರುವಂತೆ ಕಾಣುತ್ತದೆ. ಆದರೆ ನೂತನ ರಾಜ್ಯ ಮತ್ತು ಅಸ್ಸಾಮ್‌ನ ನಡುವೆ ಕೆಲವು ಉಭಯ ಸಾಮಾನ್ಯ ಸಂಪರ್ಕಗಳಿರಬೇಕೆಂದು ಸರ್ಕಾರವು ಒತ್ತಾಯಪಡಿಸುವುದು.

ಜಲ ಸೇವನೆಯ ತ್ಯಾಗ: ತಮ್ಮ ನಿರ್ಧಾರ ಅಚಲವೆಂದು ಪುರಿ ಸ್ವಾಮೀಜಿ
ಪುರಿ, ಡಿ. 30–
ಗೋಹತ್ಯೆಯ ಪೂರ್ಣ ನಿಷೇಧಕ್ಕೆ ಶಾಸನವಾಗಬೇಕೆಂಬ ತಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರವು ಒಪ್ಪಿಕೊಳ್ಳದಿದ್ದಲ್ಲಿ ಜನವರಿ 1ನೇ ತಾರೀಕಿನಿಂದ ಗಂಗಾಜಲ ಸೇವನೆಯನ್ನೂ ತಾವು ತ್ಯಜಿಸುವುದಾಗಿ ಪುರಿ ಜಗದ್ಗುರುಗಳು ತಮ್ಮ ಹಿಂದಿನ ನಿರ್ಧಾರವನ್ನು ಇಂದು ಮತ್ತೆ, ಈ ಬಗ್ಗೆ ಗಮನಸೆಳೆದ ಪಿ.ಟಿ.ಐ. ಪ್ರತಿನಿಧಿಗೆ ಖಚಿತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.