ADVERTISEMENT

ಶುಕ್ರವಾರ, 12–5–1967

​ಪ್ರಜಾವಾಣಿ ವಾರ್ತೆ
Published 11 ಮೇ 2017, 19:30 IST
Last Updated 11 ಮೇ 2017, 19:30 IST

ಆಡಳಿತ ಸುಧಾರಣೆ ಆಯೋಗದ ಬಗ್ಗೆ ಅಧ್ಯಯನ ತಂಡದ ಅತೃಪ್ತಿ
ಬೆಂಗಳೂರು, ಮೇ 11– ಯೋಜನೆಗೆ ಸಂಬಂಧಿಸಿದ ಅಧ್ಯಯನ ತಂಡವು ಸಲಹೆ ಮಾಡಿರುವ ಕೆಲವು ಪ್ರಮುಖ ಶಿಫಾರಸುಗಳನ್ನು ವ್ಯತಿರಿಕ್ತವಾಗಿ ಬದಲಾಯಿಸಲು ಆಡಳಿತ ಸುಧಾರಣಾ ಆಯೋಗವು ಕೈಗೊಂಡಿರುವ ನಿರ್ಧಾರದ ಕಾರಣ ತೀವ್ರ ಪರಿಣಾಮಗಳಾಗುವ ಸಂಭವ ಕಂಡು ಬರುತ್ತಿದೆ.
ಅಧ್ಯಯನ ತಂಡದ ಹಲವು ಸದಸ್ಯರು ಇಂತಹ ಅಧ್ಯಯನ ತಂಡಗಳ ಕಾರ್ಯನಿರ್ವಹಣೆ ಮತ್ತು ಅವುಗಳ ತೀರ್ಮಾನದ ಪಾವಿತ್ರ್ಯ ಈ ವಿಷಯಗಳನ್ನು ಕುರಿತು ಆಡಳಿತ ಸುಧಾರಣಾ ಆಯೋಗವನ್ನೇ ಪ್ರಶ್ನಿಸುವ ಸಂಭವವಿದೆ.

ದೆಹಲಿಗೆ ಶ್ರೀ ಗಿರಿ: ಹಾರ್‍ದಿಕ ಬೀಳ್ಕೊಡುಗೆ
ಬೆಂಗಳೂರು, ಮೇ 11– ಇಂದು ದೆಹಲಿಗೆ ಪ್ರಯಾಣ ಮಾಡಿದ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಜ್ಯಪಾಲ ಶ್ರೀ ವಿ.ವಿ. ಗಿರಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಹಾರ್ದಿಕ ಬೀಳ್ಕೊಡುಗೆಯನ್ನು ನೀಡಲಾಯಿತು.
ವಿಧಾನ ಸಭಾಧ್ಯಕ್ಷ ಶ್ರೀ ಬಾಳಿಗಾ, ಸಭಾಪತಿ, ಸಚಿವರು, ಉಪಸಚಿವರು, ಪಿ.ಎಸ್‌.ಸಿ. ಅಧ್ಯಕ್ಷ ಶ್ರೀ ಆರ್‌. ಚೆನ್ನಿಗರಾಮಯ್ಯ, ವಿರೋಧ ಪಕ್ಷದ ನಾಯಕ ಶ್ರೀ ಎಸ್‌. ಶಿವಪ್ಪ ಮತ್ತಿತರ ನೂರಾರು ಮಂದಿ ಹಾಜರಿದ್ದು ಶ್ರೀ ಗಿರಿ ಅವರಿಗೆ ಶುಭ ಕೋರಿದರು.
ಶ್ರೀ ಗಿರಿ ಅವರು ಮೇ 13 ರಂದು ದೆಹಲಿಯಲ್ಲಿ ನೂತನ ರಾಷ್ಟ್ರಪತಿಯಿಂದ ಪ್ರಮಾಣ ವಚನ ಸ್ವೀಕಾರವಾದ ನಂತರ ಉಪರಾಷ್ಟ್ರಪತಿಯಾಗಿ ಪ್ರತಿಜ್ಞಾವಚನವನ್ನು ಸ್ವೀಕರಿಸುವರು.

ಬನಾರಸ್‌ ವಾರ್ಸಿಟಿ ಕುಲಪತಿಯಾಗಲು ತ್ರಿಗುಣಸೇನ್‌ ನಕಾರ?
ನವದೆಹಲಿ, ಮೇ 11– ಬನಾರಸ್‌ ಹಿಂದು ವಿಶ್ವವಿದ್ಯಾನಿಲಯದ ಕುಲಪತಿಯಾಗಲು ತಮಗೆ ಸಾಧ್ಯವಾಗದೆಂದು ಕೇಂದ್ರ ಶಿಕ್ಷಣ ಮಂತ್ರಿ ಡಾ. ತ್ರಿಗುಣಸೇನ್‌ ಅವರು ತಿಳಿಸಿರುವುದಾಗಿ ಗೊತ್ತಾಗಿದೆ.
ವಿಶ್ವವಿದ್ಯಾನಿಲಯ ಸಮಿತಿಯ ಅನೇಕ ಮಂದಿ ಸದಸ್ಯರು ಕುಲಪತಿಯ ಸ್ಥಾನಕ್ಕೆ ಡಾ. ತ್ರಿಗುಣಸೇನ್‌ ಅವರ ಹೆಸರನ್ನು ಸೂಚಿಸಿದ್ದಾರೆ.
ಡಾ. ಸಿ.ವಿ. ರಾಮನ್‌ ಗೌರವಾರ್ಥ ವಿಶೇಷ ಅಂಚೆ ಚೀಟಿ ಪ್ರಕಟಣೆ
ಬೆಂಗಳೂರು, ಮೇ 11– ಲೋಕವಿಖ್ಯಾತ ವಿಜ್ಞಾನಿ ನೊಬೆಲ್‌ ಪ್ರಶಸ್ತಿ ವಿಜೇತ ಡಾ.ಸಿ.ವಿ. ರಾಮನ್‌ ಅವರು 1968ರಲ್ಲಿ ಕಾಲಿಡಲಿರುವ 80ನೇ ವಯಸ್ಸಿನ ನೆನಪಿಗಾಗಿ ವಿಶೇಷ ಅಂಚೆ ಚೀಟಿಗಳನ್ನು ಪ್ರಕಟಿಸುವ ಉದ್ದೇಶ ಅಂಚೆ ಇಲಾಖೆಗೆ ಇದೆ ಎಂದು ಮೈಸೂರು ವಲಯದ ಪೋಸ್ಟ್‌ ಮಾಸ್ಟರ್‌ ಜನರಲ್‌ ಶ್ರೀ ಎಂ.ಬಿ. ಸಾರಂಗಪಾಣಿ ಅವರು ಇಂದು ಇಲ್ಲಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.