ADVERTISEMENT

ಸೋಮವಾರ, 6–11–1967

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2017, 19:30 IST
Last Updated 5 ನವೆಂಬರ್ 2017, 19:30 IST

ಮಹಾಜನ್ ಶಿಫಾರಸನ್ನು ಕಾರ್ಯಗತ ಮಾಡದಿದ್ದರೆ ಅಂತರ್ಯುದ್ಧದ ಅಪಾಯ
ನಾಗಪುರ, ನ. 5–
ಮಹಾರಾಷ್ಟ್ರ– ಮೈಸೂರು ಗಡಿ ವಿವಾದವನ್ನು ಕುರಿತ ಮಹಾಜನ್ ಆಯೋಗದ ವರದಿಯನ್ನು ಕಾರ್ಯಗತ ಮಾಡಲು ದೃಢವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾಗಸೇನಾ ಮುಖ್ಯರೂ, ನಾಗಪುರ ನಗರ ಕಾಂಗ್ರೆಸ್ ಸಮಿತಿಯ ಮಾಜಿ ಕಾರ್ಯದರ್ಶಿಯೂ ಆದ ಶ್ರೀ ಅಪ್ಪಾಜಿ ಪುಣಜೆ ಅವರು ನಿನ್ನೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದರು. ಹಾಗೆ ಮಾಡದಿದ್ದರೆ, ಪ್ರಜಾಪ್ರಭುತ್ವಕ್ಕೆ ವಿನಾಶಕಾರಿ ಪೆಟ್ಟು ಕೊಟ್ಟಂತಾಗುವುದಲ್ಲದೆ, ದೇಶದಲ್ಲಿ ಅಂತರ್ಯುದ್ಧವೂ ನಡೆಯಬಹುದು ಎಂದು ಇಂದು ಇಲ್ಲಿ ಪ್ರಕಟವಾದ ಹೇಳಿಕೆಯೊಂದರಲ್ಲಿ ಅವರು ತಿಳಿಸಿದ್ದಾರೆ.

ಮುಂಬೈನಲ್ಲಿ ಮಹಾಜನ್ ವರದಿ ದಹನ
ಮುಂಬೈ, ನ. 5–
ಸಂಪೂರ್ಣ ಮಹಾರಾಷ್ಟ್ರ ಸಮಿತಿಯ ಸುಮಾರು ಮುನ್ನೂರು ಮಂದಿ ಸ್ವಯಂ ಸೇವಕರು ಇಲ್ಲಿನ ಫ್ಲೋರಾ ಫೌಂಟನ್ ಸಮೀಪದ ಹುತಾತ್ಮರ ಸ್ಮಾರಕದ ಬಳಿ ಮಹಾಜನ್ ಆಯೋಗದ ವರದಿಯನ್ನು ಸುಟ್ಟು ಹಾಕಿದರು. ಆಯೋಗದ ಶಿಫಾರಸುಗಳ ವಿರುದ್ಧ ಪ್ರತಿಭಟನೆ ಸೂಚಿಸುವುದೇ ಈ ದಹನದ ಉದ್ದೇಶ. ಆಯೋಗದ ವರದಿ ಪ್ರತಿಗಳು ದೊರಕಲಿಲ್ಲವಾದ್ದರಿಂದ, ವರದಿ ಪ್ರಕಟವಾಗಿದ್ದ ನಗರದ ದಿನ ಪತ್ರಿಕೆಗಳನ್ನು ಕೊಂಡು ಸ್ಮಾರಕದ ಬಳಿ ಅವುಗಳನ್ನು ಬಹಿರಂಗವಾಗಿ ಸುಟ್ಟರು.

ಮಹಾಜನ್ ಶಿಫಾರಸ್ ಬಗ್ಗೆ ಬೆಳಗಾವಿ ನಗರದಲ್ಲಿ ಸಂತಸ
ಬೆಳಗಾವಿ, ನ. 5–
ಬೆಳಗಾವಿ ನಗರ ಮೈಸೂರಿನಲ್ಲಿಯೇ ಉಳಿಯಬೇಕೆಂಬ ಶ್ರೀ ಮಹಾಜನ್ ಅವರ ಶಿಫಾರಸಿನಿಂದ ಸರ್ವ ಸಾಮಾನ್ಯವಾಗಿ ಎಲ್ಲರಿಗೂ ಇಲ್ಲಿ ಭಾರಿ ಸಂತಸ ಉಂಟಾಗಿದೆ. ಕಳೆದ ಹನ್ನೊಂದು ವರ್ಷಗಳ ವಿವಾದವನ್ನು ಅಂತ್ಯಗೊಳಿಸಲು ಮಹಾಜನ್ ವರದಿಯನ್ನು ಕೂಡಲೆ ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕೆಂದೂ ಜನರು ಭಾವಿಸಿದ್ದಾರೆ.

ADVERTISEMENT

ಜೋರ್ಡಾನ್ ಗ್ರಾಮಗಳ ಮೇಲೆ ಇಸ್ರೇಲಿ ಪಡೆಗಳ ಗುಂಡು ದಾಳಿ
ಅಮ್ಮಾನ್, ನ. 5–
ಜೋರ್ಡಾನ್ ನದಿಯ ಪೂರ್ವದಲ್ಲಿ ನಾಲ್ಕು ಗ್ರಾಮಗಳ ಮೇಲೆ ಇಸ್ರೇಲಿ ಬಂದೂಕುಗಳು ಇಂದು ಬೆಳಿಗ್ಗೆ ಗುಂಡು ಹಾರಿಸಿದವೆಂದು ಮಿಲಿಟರಿ ವಕ್ತಾರರು ಇಲ್ಲಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.