ಜಾನ್ಸನ್ಗೆ ಕೆನಡಿ ಬೆಂಬಲವಿಲ್ಲ
ವಾಷಿಂಗ್ಟನ್, ಮಾ. 15– ಅಧ್ಯಕ್ಷ ಜಾನ್ಸನ್ ಅವರ ಪುನಃ ನಾಮಕರಣಕ್ಕೆ ತಾವು ಬೆಂಬಲ ನೀಡುವುದಿಲ್ಲವೆಂದು ಸೆನೆಟರ್ ರಾಬರ್ಟ್ ಕೆನಡಿ ತಿಳಿಸಿದರೆಂದು ನ್ಯೂಯಾರ್ಕ್ ಟೈಮ್ಸ್ ಇಂದು ವರದಿ ಮಾಡಿದೆ.
ಪಾನನಿರೋಧ ಸಡಿಲಿಸಿದ ಪರಿಣಾಮ: ಕಳ್ಳಬಟ್ಟಿ ಇಳಿಮುಖ– ಶ್ರೀ ಹೆಗಡೆ
ಬೆಂಗಳೂರು, ಮಾ. 15– ಪಾನನಿರೋಧವನ್ನು ಸಡಿಲಿಸಿದ ನಂತರ ಕಳ್ಳಬಟ್ಟಿಗಳ ಸಂಖ್ಯೆ ಇಳಿಯುತ್ತಿದೆ.
ಹಣಕಾಸು ಸಚಿವ ಶ್ರೀ ರಾಮಕೃಷ್ಣ ಹೆಗಡೆಯವರು ಈ ವಿಷಯವನ್ನು ಇಂದು ವಿಧಾನಸಭೆಯಲ್ಲಿ ಶ್ರೀ ವಾಟಾಳ್ ನಾಗರಾಜ್ (ಸ್ವತಂತ್ರ–ಚಿಕ್ಕಪೇಟೆ) ಅವರಿಗೆ ತಿಳಿಸಿದರು.
ಪತ್ತೆಯಾದ ಕಳ್ಳಬಟ್ಟಿ ಕೇಂದ್ರಗಳ ಅಧಾರದ ಮೇಲೆ ಅದನ್ನು ತಿಳಿಸುತ್ತಿರುವುದಾಗಿ ಸ್ಪಷ್ಟಪಡಿಸಿ 1966ನೇ ಅಕ್ಟೋಬರ್ 15 ರಿಂದ 1967ನೇ ಫೆಬ್ರವರಿ 15ರ ಒಳಗಾಗಿ ಪತ್ತೆಯಾದ ಕೇಂದ್ರಗಳ ಸಂಖ್ಯೆ 2888 ಆದರೆ 1967ನೇ ಅಕ್ಟೋಬರ್ 15 ರಿಂದ 1968ನೇ ಫೆಬ್ರವರಿ 15ರ ಒಳಗಾಗಿ ಪತ್ತೆಯಾದ ಕೇಂದ್ರಗಳು 317 ಎಂದರು.
ಉಕ್ಕಿಬಂದ ದುಃಖ
ಬೆಂಗಳೂರು, ಮಾ. 15– ಎರಡು ತಿಂಗಳ ಹಿಂದೆ ನಡೆದ ತಮ್ಮ ಬಂಧು ಒಬ್ಬರ ಆಕಸ್ಮಿಕ ಮರಣದ ಬಗ್ಗೆ ಪೋಲೀಸರು ‘ಇನ್ನೂ ಏನೂ ಮಾಡಿಲ್ಲ’ ಎಂದು ಟೀಕಿಸಿದ ಸದಸ್ಯರೊಬ್ಬರು ಇಂದು ವಿಧಾನಪರಿಷತ್ತಿನಲ್ಲಿ ಬಿಕ್ಕಿ ಬಿಕ್ಕಿ ಅತ್ತರು. ಕಾಂಗ್ರೆಸ್ ಸದಸ್ಯ ಶ್ರೀ ನಂದೀಶ್ರವರು ಆಯವ್ಯಯ ಅಂದಾಜಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಪೋಲೀಸ್ ಇಲಾಖೆ ಬಗ್ಗೆ ಪ್ರಸ್ತಾಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.