ADVERTISEMENT

50 ವರ್ಷಗಳ ಹಿಂದೆ

ಮಂಗಳವಾರ, 25–10–1966

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST

‘ಓಂಬಡ್ಸ್‌ಮನ್‌’ ನೇಮಕಕ್ಕೆ ಶಿಫಾರಸು
ಮುಂಬೈ, ಅ. 24–
ಸಚಿವರೂ ಸೇರಿ ಆಡಳಿತದ ವಿಷಯದಲ್ಲಿ ಬರುವ ಸಾರ್ವಜನಿಕರ ಕುಂದು  ಕೊರತೆಯ ಬಗ್ಗೆ ವ್ಯವಹರಿಸುವುದಕ್ಕಾಗಿ ‘ಓಂಬಡ್ಸ್‌ಮನ್‌’ ಮಾದರಿಯ ಸ್ವತಂತ್ರ ವ್ಯವಸ್ಥೆ ರಚಿಸುವ ಸಂಬಂಧದಲ್ಲಿ ಕೇಂದ್ರ ಸರ್ಕಾರಕ್ಕೆ ಆಡಳಿತ ಸುಧಾರಣಾ ಸಮಿತಿಯು ತಾತ್ಕಾಲಿಕ ವರದಿಯೊಂದನ್ನು ಸಲ್ಲಿಸಿದೆಯೆಂದು ಆಯೋಗದ ಸದಸ್ಯ
ಶ್ರೀ  ಎಚ್‌.ವಿ. ಕಾಮತ್‌  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

***
ಷರತ್ತಿಲ್ಲದೆ ತಕ್ಷಣ ವಿಯಟ್ನಾಂ ಮೇಲೆ ಬಾಂಬ್‌ ದಾಳಿ ನಿಲ್ಲಲಿ
ನವದೆಹಲಿ, ಅ. 24–  ‘
ಯಾವುದೇ ಪೂರ್ವ ಷರತ್ತಿಲ್ಲದೆ’ ಉತ್ತರ ವಿಯಟ್ನಾಂ ಮೇಲೆ ಬಾಂಬು ದಾಳಿಯನ್ನು ತತ್‌ಕ್ಷಣ  ನಿಲ್ಲಿಸಬೇಕೆಂದು ತ್ರಿಪಕ್ಷ ಅಲಿಪ್ತರ ಶೃಂಗ ಸಭೆ ಸಂಯುಕ್ತ ಪ್ರಕಟಣೆ ಕರೆ ಕೊಟ್ಟಿದೆ.

ಅಧ್ಯಕ್ಷ ಟಿಟೊ, ಅಧ್ಯಕ್ಷ ನಾಸೆರ್‌ ಮತ್ತು ಪ್ರಧಾನಿ ಇಂದಿರಾಜಿ ಇವರುಗಳು ಇಂದು ಸಂಯುಕ್ತ ಹೇಳಿಕೆಯಲ್ಲಿ ಅಂತರರಾಷ್ಟ್ರೀಯ ಶಾಂತಿ ಮತ್ತು  ಭದ್ರತೆಯನ್ನು ಕಾಪಾಡಲು ಶಾಂತಿಯುತ ಸಹಬಾಳ್ವೆಯ ಸೂತ್ರದ ಸಾರ್ವತ್ರಿಕ ಸ್ವೀಕಾರ ಮತ್ತು  ಕಾರ್ಯಾಚರಣೆ ಅತ್ಯವಶ್ಯವೆಂದು ಘೋಷಿಸಿದ್ದಾರೆ.

ವಿಯಟ್ನಾಂನಲ್ಲಿ ಶಾಂತಿ ಸ್ಥಾಪಿಸುವ ಯಾವುದೇ ಪ್ರಯತ್ನದಲ್ಲಿ ವಿಯಟ್ನಾಂ ರಾಷ್ಟ್ರೀಯ ವಿಮೋಚನಾ ರಂಗವು ಒಂದು ಪ್ರಮುಖ  ಪಕ್ಷವಾಗಿ ಭಾಗವಹಿಸುವುದು ಅತ್ಯವಶ್ಯವೆಂದೂ ಸಂಯುಕ್ತ ಪ್ರಕಟಣೆ ಸೂಚಿಸುತ್ತದೆ.

***
ಬಾಂಬ್‌ ದಾಳಿ ನಿಂತರೆ ಶಾಂತಿ ಸ್ಥಾಪನೆ ಸಾಧ್ಯ ಎಂದು ಇಂದಿರಾ
ನವದೆಹಲಿ, ಅ. 24– 
ವಿಯಟ್ನಾಂನಲ್ಲಿ ಮೊದಲು ಆಗಬೇಕಾದ ಕಾರ್ಯವೆಂದರೆ ಬಾಂಬ್‌ ದಾಳಿಯ ನಿಲುಗಡೆಯೇ ಎಂದು ಪ್ರಧಾನ ಮಂತ್ರಿ ಶ್ರೀಮತಿ  ಇಂದಿರಾ ಗಾಂಧಿಯವರು ಇಂದು ಇಲ್ಲಿ ಅಧ್ಯಕ್ಷ ಟಿಟೊ ಮತ್ತು ಅಧ್ಯಕ್ಷ ನಾಸೆರರ ಜೊತೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆಗ್ನೇಯ ಏಷ್ಯದ ಒಟ್ಟು  ಪರಿಸ್ಥಿತಿಯ ವಿಶಾಲಕರವಾದ ಅಂಶಗಳಿಂದ ಪ್ರತ್ಯೇಕವಾಗಿ ವಿಯಟ್ನಾಂ ಪ್ರಶ್ನೆಯ ಇತ್ಯರ್ಥ ಸಾಧ್ಯವೆಂದು ಭಾವಿಸಿರುವಿರಾ?’ ಎಂಬ ವರದಿಗಾರರೊಬ್ಬರ ಪ್ರಶ್ನೆಗೆ ಉತ್ತರವಾಗಿ ಅವರು ಈ ರೀತಿ  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.