ವೃತ್ತಿ, ಜಾತಿ ಮತ್ತು ಅಂಗವೈಕಲ್ಯದ ಸಲುವಾಗಿ ಬಂದ ರೂಢಿಗತ ಪದಗಳನ್ನು ಆಗಾಗ ಬದಲಿಸುವ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ಮೊದಲನೆಯದಾಗಿ ವೇಶ್ಯೆಯರನ್ನು ಲೈಂಗಿಕ ಕಾರ್ಯಕರ್ತೆಯರು ಎಂದು ಕರೆಯಲಾಯಿತು.
ಈಗ ‘ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗಳ ಅಧ್ಯಯನ ಸಮಿತಿ’ಯು ವೇಶ್ಯೆಯರಲ್ಲ, ದಮನಿತ ಮಹಿಳೆಯರು ಎಂದು ಕರೆಯಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ (ಪ್ರ.ವಾ., ಫೆ. 14). ಹೆಸರು ಬದಲಿಸಿದ ಮಾತ್ರಕ್ಕೆ ಇವರ ವೃತ್ತಿ ಬದಲಾಗಿ ಬಿಡುವುದಿಲ್ಲ ಮತ್ತು ಅವರನ್ನು ನೋಡುವ ದೃಷ್ಟಿಕೋನದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಸೂಕ್ತ ಪುನರ್ವಸತಿಯಿಂದ ಅವರ ಸಂಖ್ಯೆಯನ್ನು ಕಡಿಮೆ ಮಾಡಬಹುದಾದರೂ ಮತ್ತೊಂದು ಕಡೆ ಈ ಸಂಖ್ಯೆ ಬೆಳೆಯುತ್ತಲೇ ಇರುತ್ತದೆ.
ಅಸ್ಪೃಶ್ಯರೆಂದು ಕಡೆಗಣನೆಗೆ ಒಳಗಾದವರನ್ನು ಗಾಂಧೀಜಿ ಹರಿಜನರೆಂದು ಕರೆದರು. ಈಗ ಪರಿಶಿಷ್ಟ ಜಾತಿ ಎಂದು ಕರೆಯಲಾಗುತ್ತಿದೆ. ಹೆಸರು ಬದಲಾದರೂ ಇಂದಿಗೂ ಜಾತಿಯ ವರ್ಗ ವಿಂಗಡಣೆಯಿಂದ ಅವರು ಹೊರತಾಗಿಲ್ಲ. ರೂಢಿನಾಮ ಬದಲಾವಣೆಯಿಂದ ಅವರ ಅಂತಸ್ತು, ಗೌರವ ಹೆಚ್ಚುತ್ತದೆಯೇ? ಅಂಬೇಡ್ಕರ್ ಅವರ ಗೌರವ, ಅಂತಸ್ತು ಹೆಚ್ಚಿದ್ದು ಅವರ ಮಹಾನ್ ಕೆಲಸದಿಂದ.
ಅಂಗವಿಕಲರನ್ನು ಈಗ ಕೆಲವೆಡೆ ವಿಕಲಚೇತನರು ಎಂದು ಕರೆಯಲಾಗುತ್ತಿದೆ. ಇಂಥ ರೂಢಿನಾಮಗಳ ಬದಲಾವಣೆ ಕೇವಲ ಸಾಂಕೇತಕವೇ ಹೊರತು ಬೇರೇನೂ ಚಮತ್ಕಾರ ನಡೆಯುವುದಿಲ್ಲ.
–ಜಿ.ಬಿ.ಕಂಬಾಳಿಮಠ, ಹುನಗುಂದ