ADVERTISEMENT

ಅಲ್ಲೂ ಪ್ರಭಾವ ಬಳಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 9 ಅಕ್ಟೋಬರ್ 2015, 19:30 IST
Last Updated 9 ಅಕ್ಟೋಬರ್ 2015, 19:30 IST

ಕಳೆದ ಮೂರು ತಿಂಗಳಿನಿಂದ ಕಳಸಾ–ಬಂಡೂರಿಗಾಗಿ ಕರ್ನಾಟಕದಲ್ಲಿ ಚಳವಳಿ ನಡೆದಿದೆ. ‘ನಾನು ಬಗೆಹರಿಸುತ್ತೇನೆ. ನೀವು ಸತ್ಯಾಗ್ರಹ ಮಾಡಬೇಡಿ’ ಎಂದು ನರೇಂದ್ರ ಮೋದಿ ಅವರು ಒಂದು ಮಾತು ಹೇಳಲು ಸಿದ್ಧರಿಲ್ಲ. ಹಳ್ಳಿಗಳ ಉದ್ಧಾರ, ನೀರಾವರಿ ಯೋಜನೆ, ಹೆಚ್ಚು ಆಹಾರಧಾನ್ಯ ಉತ್ಪಾದನೆ, ರೈತರ ರಕ್ಷಣೆ ಅವರಿಗೆ ಬೇಕಾಗಿಲ್ಲ.

ಸಂಸದರ ಸಂಬಳ ಹೆಚ್ಚಳ, ದಿನಕ್ಕೆ ನಾಲ್ಕು ದಿರಿಸು ಬದಲಾವಣೆ, ವರ್ಷಕ್ಕೆ 25 ರಾಷ್ಟ್ರ ಪ್ರವಾಸ, ಅಲ್ಲಿ ಭಾರತದ ರಾಜಕಾರಣ ಟೀಕೆ, ಹಳೇ ಯೋಜನೆಗಳಿಗೆ ಹೊಸ ಹೆಸರು, ಡಿಜಿಟಲ್‌ ಇಂಡಿಯಾ, ಸ್ಮಾರ್ಟ್‌ ಸಿಟಿ...ಇವು ಬಡತನದಿಂದ ಬಂದು ಪ್ರಧಾನಿಯಾದವರ ಯೋಜನೆಗಳು. ಮದ್ರಾಸ್‌ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಬಂದಾಗ ಇಂದಿರಾ ಗಾಂಧಿ ಅವರು ವಿರೋಧಪಕ್ಷಗಳ ನೆಪ ಹೇಳಲಿಲ್ಲ. ಮೂರು ರಾಜ್ಯದ ಮುಖ್ಯಮಂತ್ರಿಗಳನ್ನು ಕರೆದು ಪರಿಹಾರ ಒದಗಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. ಬಡವರಿಗೆ ನೇರವಾಗಿ ತಲುಪುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು.

ನಮ್ಮ ಸಂಸದರಿಗೆ ತಮ್ಮ ಕರ್ತವ್ಯದ ಬಗ್ಗೆ ಅರಿವು ಇದ್ದಂತೆ ಕಾಣುವುದಿಲ್ಲ. ಇದು ಕೇಂದ್ರ ಸರ್ಕಾರ ಬಗೆಹರಿಸಬೇಕಾದ ಸಮಸ್ಯೆ. ಅಲ್ಲಿ ಪ್ರಭಾವ ಬಳಸಿ. ಇಲ್ಲಿ ರೈತರ ಸತ್ಯಾಗ್ರಹದ ಮುಖಂಡತ್ವ ವಹಿಸಿ, ನಿಮ್ಮ ಸರ್ಕಾರದ ವಿರುದ್ಧ ನೀವೇ ಹೋರಾಟ ಮಾಡುವಿರಾ? ಕಾಂಗ್ರೆಸ್‌ ಉಸಾಬರಿ ಬಿಡಿ.

ನಿಮಗೆ (ಬಿಜೆಪಿಯವರಿಗೆ) ಕೇಂದ್ರದಲ್ಲಿ ಅಧಿಕಾರ ಇದೆ. ನೀವು ಏನು ಮಾಡುತ್ತೀರೋ ಅದನ್ನು ಮೊದಲು ಮಾಡಿ. ಗೋವಾ, ಮಹಾರಾಷ್ಟ್ರ ವಿರೋಧಪಕ್ಷ ವಿರೋಧಿಸಿದರೆ ಅವರ ಬಣ್ಣ ಬಯಲಾಗುತ್ತದೆ. ಅದನ್ನು ನೋಡಿಕೊಳ್ಳಲು ಜನರು ಸಿದ್ಧರಿದ್ದಾರೆ. ನೀವು ಬುದ್ಧಿವಂತರಿದ್ದೀರಿ. ಆದರೆ ಜನ ದಡ್ಡರಲ್ಲ. ಜನರಿಗೆ ಯಾರೂ ಅನಿವಾರ್ಯರಲ್ಲ. ಜಿಗಿದಾಡಿ ನಿಮಗೆ ಮತ ಹಾಕಿದವರು ನಿಮ್ಮ ಹೇಳಿಕೆಗಳಿಂದ ಗರಬಡಿದವರಂತೆ ಕೂತಿದ್ದಾರೆ. ಇಲ್ಲಿ ಸತ್ಯಾಗ್ರಹ ಅಗತ್ಯವಿಲ್ಲ. ಅದು ದಿಲ್ಲಿ ಟಿ.ವಿ.ಯಲ್ಲಿ ಬರುವುದೂ ಇಲ್ಲ. ದಿಲ್ಲಿಗೇ ಸ್ಥಳಾಂತರವಾಗಬೇಕು. ಆ ದಿಸೆಯಲ್ಲಿ ಎಲ್ಲರೂ ಯೋಚಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.