ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ ಇದ್ದಕ್ಕಿದ್ದಂತೆ ಉತ್ತರ ಕರ್ನಾಟಕದ ಮೇಲೆ ವಿಪರೀತ ಪ್ರೀತಿ ಬಂದಿದೆ. ಮುಂದಿನ ಚುನಾವಣೆಯಲ್ಲಿ ಎಲ್ಲರೂ ಉತ್ತರ ಕರ್ನಾಟಕದಿಂದಲೇ ಸ್ಪರ್ಧೆಗಿಳಿಯುವ ಹುಮ್ಮಸ್ಸು ತೋರಿಸುತ್ತಿದ್ದಾರೆ. ಅದರೆ ‘ಅಧಿಕಾರದಲ್ಲಿದ್ದಾಗ ಆ ಭಾಗಕ್ಕೆ ಎಷ್ಟು ಆದ್ಯತೆ ಕೊಟ್ಟಿದ್ದೇವೆ, ಜನರ ಕಣ್ಣೀರು ಒರೆಸಲು ಏನೇನು ಮಾಡಿದ್ದೇವೆ’ ಎಂಬ ಬಗ್ಗೆ ಈ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.
ಹಲವು ವರ್ಷಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಸರಿಯಾಗಿ ಮಳೆಯಾಗಿಲ್ಲ. ರಾಯಚೂರು, ಯಾದಗಿರಿ, ವಿಜಯಪುರ, ಬೆಳಗಾವಿ ಜಿಲ್ಲೆಗಳ ಅನೇಕ ತಾಲ್ಲೂಕುಗಳಲ್ಲಿ ಬರ ತಾಂಡವವಾಡುತ್ತಿದೆ. ಜನರಿಗೆ ಸಮರ್ಪಕವಾಗಿ ಪರಿಹಾರ ಕೊಟ್ಟಿಲ್ಲ. ಆದರೂ ನಾಯಕರು ಇಲ್ಲಿಂದ ಸ್ಪರ್ಧಿಸಲು ಉತ್ಸಾಹ ತೋರುತ್ತಿದ್ದಾರೆ.
ಕೃಷ್ಣಾ ನದಿ ಬತ್ತಿ, ಮಹಾರಾಷ್ಟ್ರದಿಂದ ನೀರು ತರುವಂತೆ ಜನರು ಗೋಗರೆಯುತ್ತಿದ್ದಾಗ, ರೈತರು ನಡುಬೀದಿಯಲ್ಲಿ ನಿಂತು ಮಹದಾಯಿ ಹೋರಾಟ ಮಾಡುತ್ತಿರುವಾಗ ಇವರ ‘ಉತ್ತರ ಕರ್ನಾಟಕ ಪ್ರೀತಿ’ ಎಲ್ಲಿತ್ತು? ಮೊದಲು ಜನರ ಕಲ್ಯಾಣ ಮಾಡಿ, ಅವರ ಕಷ್ಟಗಳಿಗೆ ಸ್ಪಂದಿಸಿ ಆಮೇಲೆ ಇಲ್ಲಿಂದ ಸ್ಪರ್ಧೆಗಿಳಿದರೆ ಅದಕ್ಕೊಂದು ಅರ್ಥವಿರುತ್ತದೆ.
–ವಿನಾಯಕ ಮಠಪತಿ, ಅಥಣಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.