ವಿಧಾನಮಂಡಲದಲ್ಲಿ ಶಾಸಕರು ಪಕ್ಷಭೇದ ಮರೆತು ಮಾಧ್ಯಮದವರ ವಿರುದ್ಧ ಹರಿಹಾಯ್ದಿದ್ದಾರೆ. ಸದನದಲ್ಲಿ ಕೆಲವರು ಬಳಸಿರುವ ಪದ ಅವರ ಸ್ಥಾನಕ್ಕೆ ಯೋಗ್ಯವಾದುದಲ್ಲ.
ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆ ಪತ್ರಿಕಾರಂಗವೂ ಕ್ರಿಯಾಶೀಲವಾಗಿ ಕೆಲಸ ಮಾಡಬೇಕಾಗುತ್ತದೆ. ಇದು ನಮ್ಮ ಸಂವಿಧಾನದ ಆಶಯವೂ ಹೌದು. ಜನಪ್ರತಿನಿಧಿಗಳಾದವರಿಗೆ ಕನಿಷ್ಠ ಈ ಅರಿವೂ ಇಲ್ಲದಿರುವುದು ದುರದೃಷ್ಟಕರ.
ತಾವು ಮಾಡಿದ ತಪ್ಪು ಮಾಧ್ಯಮಗಳಲ್ಲಿ ಪ್ರಕಟವಾದಾಗ ಅದರಿಂದ ಎಚ್ಚೆತ್ತು ತಪ್ಪನ್ನು ತಿದ್ದಿಕೊಳ್ಳಬೇಕು. ಸನ್ಮಾರ್ಗದಲ್ಲಿ ನಡೆಯುವಂಥ ಔದಾರ್ಯ ತೋರಬೇಕು. ಅದನ್ನು ಬಿಟ್ಟು ತಪ್ಪನ್ನು ಎತ್ತಿ ತೋರಿಸುವ ಮಾಧ್ಯಮಗಳ ದನಿ ಹತ್ತಿಕ್ಕುವ ಪ್ರಯತ್ನಕ್ಕೆ ಕೈಹಾಕುವುದು ಸರಿಯಲ್ಲ.
ದುರುದ್ದೇಶದಿಂದ ಅಪಪ್ರಚಾರ ಮಾಡಿ, ಯಾರದಾದರೂ ತೇಜೋವಧೆ ಮಾಡುತ್ತಿದ್ದರೆ ಅಂತಹ ಮಾಧ್ಯಮದ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ. ತಮ್ಮ ಮೂಗಿನ ನೇರಕ್ಕೆ ಮಾಧ್ಯಮದ ಪ್ರತಿನಿಧಿಗಳು ವರ್ತಿಸಬೇಕು ಎಂದು ಪ್ರಜಾಪ್ರತಿನಿಧಿಗಳು ಬಯಸುವುದು ಸರಿಯಾದ ನಡೆಯಲ್ಲ.
-ಸುರೇಶ್ ನಾಯಕ್, ಚಾವಲ್ಮನೆ, ಕೊಪ್ಪ ತಾಲ್ಲೂಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.