ADVERTISEMENT

ಎಲ್ಲರಿಗೂ ಕಾಳಜಿ ಏಕಿಲ್ಲ?

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST

ಆಕಾರ್‌ ಪಟೇಲ್‌ ಅವರ ‘ನಿರಾಶ್ರಿತರು ಎಂಬ ವಲಸಿಗರನ್ನು ಕಾಣುವ ಬಗೆ’ ಲೇಖನ (ಪ್ರ.ವಾ., ಸೆ.18) ನಿರಾಶ್ರಿತರ ಸಮಸ್ಯೆಗಳ ಮೇಲೆ ಹೊಸ ಬೆಳಕು ಚೆಲ್ಲಿದೆ. ಮ್ಯಾನ್ಮಾರ್‌ನಂಥ ರಾಷ್ಟ್ರದಿಂದ ರೋಹಿಂಗ್ಯಾ ಮುಸ್ಲಿಂ ಸಮುದಾಯ ನಮ್ಮ ದೇಶವನ್ನು ಆಶ್ರಯಿಸಿ ಬಂದರೆ, ಅವರ ಸಂಕಷ್ಟಗಳು ನಮ್ಮ ದೇಶದ ಮುಸ್ಲಿಮರಿಗೆ ಮಾತ್ರ ಯಾಕೆ ಅರ್ಥ ಆಗುತ್ತವೆ? ಇವರಿಗೆ ದೇಶದಲ್ಲಿ ಆಶ್ರಯ ನೀಡಬೇಕು ಎಂದು ಈಚೆಗೆ ಬೆಳಗಾವಿ, ಗೋಕಾಕದಂತಹ ಊರುಗಳಲ್ಲಿ ಕೆಲ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿರುವುದನ್ನು, ನಿರಾಶ್ರಿತರ ಬಗ್ಗೆ ಅವರ ಕಳಕಳಿಯನ್ನು ಕಂಡು ಸಂತಸವೆನಿಸಿತು. ಅಂತೆಯೇ ಈ ಕಾಳಜಿ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿದ್ದನ್ನು ನೋಡಿ ಬೇಸರವೆನಿಸಿತು.

ಕೆಲ ದಿನಗಳ ಹಿಂದೆ ಈ ನಿರಾಶ್ರಿತರಿಗಾಗಿ ವಿಶ್ವ ಸಂಸ್ಥೆಯ ಮೂಲಕ ಆಹಾರ ಪೊಟ್ಟಣಗಳನ್ನು, ಬಟ್ಟೆಗಳನ್ನು ಲಾರಿಗಳಲ್ಲಿ ತುಂಬಿ ಕಳಿಸಲಾಯಿತು. ರೋಹಿಂಗ್ಯಾ ನಿರಾಶ್ರಿತರ ಗುಂಪು ಎಷ್ಟೊಂದು ಹಸಿದಿತ್ತೆಂದರೆ, ಅವರಿಗೆ ವ್ಯವಸ್ಥಿತವಾಗಿ ಇವುಗಳನ್ನು ವಿತರಿಸಲೂ ಆಗದೆ,  ಲಾರಿಗಳಿಂದ ಆಹಾರ-ಪೊಟ್ಟಣಗಳನ್ನು ಅವರತ್ತ ಎಸೆಯಲಾಯಿತು (ಈ ಚಿತ್ರವು ಇದೇ ಪತ್ರಿಕೆಯಲ್ಲಿ ಬಿತ್ತರವಾಗಿದೆ). ಈ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಇಬ್ಬರು ಮೃತಪಟ್ಟಿದ್ದಾರೆ. ರೋಹಿಂಗ್ಯಾ ಮುಸ್ಲಿಮರ ದುಃಸ್ಥಿತಿಯನ್ನು ಊಹಿಸಿಕೊಳ್ಳಲು ಈ ಒಂದು ಘಟನೆ ಸಾಕು.

ನಮ್ಮ ದೇಶದ ವಿದ್ಯಾವಂತ ಯುವಕರು ಅಮೆರಿಕ, ಇಂಗ್ಲೆಂಡ್ ಗಳಂತಹ ದೇಶಗಳಿಗೆ ಉನ್ನತ ವ್ಯಾಸಂಗಕ್ಕಾಗಿಯೋ, ಉದ್ಯೋಗವನ್ನು ಅರಸಿಯೋ ಹೋಗಿ ಅಲ್ಲಿಯೇ ವಾಸಿಸುತ್ತಿಲ್ಲವೇ? ನಮ್ಮವರು ಪರ ದೇಶಗಳಿಗೆ ಹೋಗುವಾಗ ಸಂತಸದಿಂದ ಬೀಳ್ಕೊಡುವಂತೆ ರೋಹಿಂಗ್ಯಾ ನಿರಾಶ್ರಿತರಿಗೂ ಇಲ್ಲಿ ವಾಸಿಸಲು ಅವಕಾಶ ಮಾಡಿಕೊಡುವ ಉದಾರತೆಯನ್ನು ನಮ್ಮ ಸರ್ಕಾರ ಮೆರೆಯಬೇಕು.

ADVERTISEMENT

–ಮಯೂರ, ಸವದತ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.