ವರನಟ ಡಾ. ರಾಜ್ಕುಮಾರ್ ನಮ್ಮನ್ನಗಲಿ ಎಂಟು ವರ್ಷಗಳಾಗಿವೆ. ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಸಮಾಧಿ ಸ್ಥಳದಲ್ಲಿ ಇನ್ನೂ ಕೆಲವು ಕೆಲಸಗಳು ನಿಧಾನಗತಿಯಲ್ಲಿ ನಡೆಯುತ್ತಿರುವುದು ಅಣ್ಣಾವ್ರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಲೇಸರ್ ತಂತ್ರಜ್ಞಾನದ ಕಾರಂಜಿ, ರಾಜ್ ಬಯಲು ರಂಗಮಂದಿರ ಕಾಮಗಾರಿಗಳು ಎಂಟು ವರ್ಷಗಳಾದರೂ ಇನ್ನೂ ಏಕೆ ಪೂರ್ಣವಾಗಿಲ್ಲ? ಬಿಬಿಎಂಪಿ ಹಾಗೂ ಉದ್ಯಮ ಏಕೆ ನಿರ್ಲಕ್ಷ್ಯ ತಾಳಿದೆ.
ಡಾ. ರಾಜ್ ಕುಟುಂಬ ಹಾಗೂ ಉದ್ಯಮ ಈ ನಿರ್ಲಕ್ಷ್ಯದ ವಿರುದ್ಧ ದಿಟ್ಟ ದನಿ ಎತ್ತಬಾರದೆ? ಹಾಗೆಯೇ ನಗರದ ವಿವಿಧ ಪ್ರದೇಶಗಳಲ್ಲಿ ನಿರ್ಮಿಸಿರುವ ಡಾ. ರಾಜ್ ಪ್ರತಿಮೆಗಳ ನಿರ್ವಹಣೆಯ ಹೊಣೆಯನ್ನು ಸ್ಥಳೀಯರ ಸಹಕಾರದಿಂದ ಬಿಬಿಎಂಪಿ ಹೊತ್ತುಕೊಳ್ಳಲಿ. ಡಾ. ರಾಜ್ ಅವರ ಕುರಿತು ಪ್ರಕಟವಾಗಿರುವ ಪುಸ್ತಕಗಳನ್ನು ಸುಲಭ ಬೆಲೆಯಲ್ಲಿ ಎಲ್ಲೆಡೆ ಸಿಗುವಂತೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ ಕ್ರಮ ಕೈಗೊಳ್ಳಲಿ.
ಡಾ. ರಾಜ್ ಅಂಚೆ ಚೀಟಿ ಹಾಗೂ ವಿಶೇಷ ಅಂಚೆ ಲಕೋಟೆ ಎಲ್ಲಾ ಅಂಚೆ ಕಚೇರಿಗಳಲ್ಲಿ ದೊರೆಯುವಂತಾಗಲಿ. ಡಾ.ರಾಜ್ಕುಮಾರ್ ಅವರ ಎಂಟನೇ ಪುಣ್ಯತಿಥಿಯನ್ನು ಏ.12ರಂದು ಆಚರಿಸಲಾಗಿದೆ.
–ಕಾಡನೂರು ರಾಮಶೇಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.