ಇತ್ತೀಚೆಗೆ ಪುರಿ ಜಗನ್ನಾಥನ ದರ್ಶನಕ್ಕಾಗಿ ಹೋಗಿದ್ದ ನಾವು ಪ್ರಯಾಣದ ಮಧ್ಯದಲ್ಲಿ ಜಗತ್ಪ್ರಸಿದ್ಧ ಕೊನಾರ್ಕ್ ದೇವಾಲಯಕ್ಕೂ ಹೋಗಿದ್ದೆವು. ದೇವರಿಲ್ಲದ ದೇವಸ್ಥಾನದ ಅದ್ಭುತ ಕೆತ್ತನೆಗಳನ್ನು ಅಚ್ಚರಿಯಿಂದ ವೀಕ್ಷಿಸಿ ಫೋಟೊ ತೆಗೆಸಿಕೊಂಡ ನಂತರ ದೇವಾಲಯದ ಸಮೀಪದ ಒಂದು ಒಣಹಣ್ಣುಗಳ ಅಂಗಡಿ ಬಳಿ ತೆರಳಿದೆವು. ಅಲ್ಲಿ ತರತರಹದ ಹಣ್ಣುಗಳನ್ನು ಚಂದದ ಪ್ಯಾಕೆಟ್ಗಳಲ್ಲಿ ಜೋಡಿಸಿಟ್ಟಿದ್ದರು. ಗೋಡಂಬಿ ಪೊಟ್ಟಣ ಕೈಗೆ ತೆಗೆದುಕೊಂಡು ನೋಡಿದಾಗ ಅದರ ಒಂದು ಬದಿಯ ಕಾಲುಭಾಗ ಪಾರದರ್ಶಕವಾಗಿದ್ದ ಜಾಗದಲ್ಲಿ ಒಳ್ಳೆಯ ಗೋಡಂಬಿ ಬೀಜಗಳಿದ್ದವು. ಬೆಲೆ ಕೂಡಾ ಕಡಿಮೆಯೇ ಎನಿಸಿತು.
‘ಗೋವಿಂದ’ ಎಂಬ ಹೆಸರಿನ ಇದು ಸ್ಥಳೀಯ ತಾಜಾ ಮಾಲೆಂದು ಅಂಗಡಿಯವನು ನಂಬಿಸಿದ. ನಾವೆಲ್ಲಾ ನಂಬಿ ಎರಡು–ಮೂರು ಪ್ಯಾಕೆಟ್ ಖರೀದಿಸಿ ಊರಿಗೆ ತಂದದ್ದೂ ಆಯಿತು. ಊರಿಗೆ ಬಂದ ನಂತರ ತಿನ್ನುವ ಆಸೆಯಿಂದ ಒಂದು ಪ್ಯಾಕೆಟ್ ಒಡೆದರೆ ಮೇಲ್ಭಾಗದಲ್ಲಿ ಮಾತ್ರ ಒಳ್ಳೆ ಗೋಡಂಬಿಗಳು ಇದ್ದವು. ಉಳಿದೆಲ್ಲಾ ಕಡೆ ಬರೀ ಹುಳುಕು, ಹಾಳಾದ ಹಣ್ಣುಗಳೇ ಇದ್ದವು.
ಮೋಸ ಹೋದುದ್ದು ಅರಿವಾಗಿ, ನಮ್ಮ ಜೊತೆ ಬಂದಿದ್ದ ಸ್ನೇಹಿತರಿಗೆ ಫೋನ್ ಮಾಡಿದಾಗ, ಅವರು ‘ನಿಮ್ಮ ಪೊಟ್ಟಣದಲ್ಲಿ ಬರೀ ಹುಳುಕು ಗೋಡಂಬಿ ಇದೆ. ನಮ್ಮದರಲ್ಲಿ ಅದರ ಜೊತೆ ಹುಳುಗಳೂ ಹರಿದಾಡುತ್ತಿವೆ’ ಎಂದು ಉತ್ತರಿಸಿದರು. ಒಟ್ಟಿನಲ್ಲಿ ನಾವು ತಂದ ಎಲ್ಲಾ ಪ್ಯಾಕೆಟ್ಗಳೂ ‘ಗೋವಿಂದಾ... ಗೋವಿಂದ’ ಆಗಿದ್ದವು!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.