ADVERTISEMENT

ಜಡತ್ವ ನಿವಾರಣೆ...?

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 19:30 IST
Last Updated 13 ಫೆಬ್ರುವರಿ 2017, 19:30 IST
ಪರೀಕ್ಷೆಯಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದರೆ ಅಂಥ ವಿದ್ಯಾರ್ಥಿಗಳನ್ನು ಮೂರು ವರ್ಷ ಡಿಬಾರ್ ಮಾಡಲು ಸರ್ಕಾರ ನಿರ್ಧರಿಸಿರುವುದು ಯೋಗ್ಯವಾಗಿದೆ. ಆದರೆ ಶಿಕ್ಷಕ, ಪ್ರಾಚಾರ್ಯ, ವಿಶ್ವವಿದ್ಯಾಲಯದ ಕುಲಪತಿಗಳು ಆಕ್ರಮವೆಸಗಿದರೆ, ನಕಲು ಮಾಡಿ ಎಂ.ಫಿಲ್. ಪಡೆದರೆ ಅಂಥವರಿಗೆ ತ್ವರಿತವಾಗಿ ಶಿಕ್ಷೆ ಆಗುವಂತೆ ಮಾಡುವ ಬಗ್ಗೆ  ಸರ್ಕಾರಕ್ಕೆ ಕಾಳಜಿ ಇದ್ದಂತಿಲ್ಲ.
 
ಎಂಟು ವರ್ಷಗಳ ಹಿಂದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರ ಸೇವೆಯನ್ನು ಸರ್ಕಾರವು ಕಾಯಂಗೊಳಿಸುವ ಸಂದರ್ಭದಲ್ಲಿ, ‘ಕಳಪೆ ಗುಣಮಟ್ಟದ, ಧನದಾಹಿ ವಿಶ್ವವಿದ್ಯಾಲಯಗಳಿಂದ ಪಡೆದ ಎಂ.ಫಿಲ್‌.ಗಳಿಗೆ ಮಾನ್ಯತೆ ನೀಡುವುದಿಲ್ಲ’ ಎಂದು ಅಂದಿನ ಉನ್ನತ ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದರು. ಮರುದಿನವೇ ಅವರು ನಿಲುವು ಬದಲಿಸಿ, ‘ಆ ವಿಶ್ವವಿದ್ಯಾಲಯಗಳೂ  ಯು.ಜಿ.ಸಿ.ಯಿಂದ ಮಾನ್ಯತೆ ಪಡೆದಿರುವುದರಿಂದ ಆ ಪದವಿಗಳನ್ನು ಪುರಸ್ಕರಿಸುತ್ತೇವೆ’ ಎಂದಿದ್ದರು.  
 
ಅದರಂತೆಯೇ ಅತಿಥಿ ಉಪನ್ಯಾಸಕರ ಸೇವೆಯನ್ನು ಶಾಶ್ವತಗೊಳಿಸಲಾಯಿತು. ತೆರೆಯ ಮರೆಯಲ್ಲಿ ಒಂದೇ ದಿನದಲ್ಲಿ ಏನೇನು ಆಗಿರಬಹುದು ಎಂಬುದು ಊಹೆಗೆ ಬಿಟ್ಟ ವಿಷಯ. ವಿಶ್ವವಿದ್ಯಾಲಯಗಳ ಕುಲಪತಿಗಳ ವಿರುದ್ಧ ಆರೋಪಗಳಿಗೆ ಸಂಬಂಧಿಸಿದಂತೆ  ಬೇರೆ ಬೇರೆ ಬಗೆಯ ತನಿಖೆಗಳು ನಡೆದು ವರದಿಗಳು ಬಂದಿದ್ದರೂ ಅವನ್ನು ಆಧರಿಸಿ ಕ್ರಮ ಕೈಗೊಳ್ಳದಿರುವ ಸರ್ಕಾರದ ಜಡತ್ವಕ್ಕೆ ಏನು ಹೇಳಬೇಕು?
–ಟಿ.ಪಿ. ಸುಭಾಷಿಣಿ, ಮೈಸೂರು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.