ರಾಜ್ಯದ ಎಲ್ಲ ಕಡೆ ನಕಲಿ ವೈದ್ಯರಿರುವಂತೆ ಕಾಣುತ್ತಿದೆ. ಇವರು ಕೊಡುವ ಚಿಕಿತ್ಸೆಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ತಮ್ಮ ನೋವು, ಬಾಧೆಗಳನ್ನು ತಡೆಯಲಾರದೆ ನಕಲಿ ವೈದ್ಯರ ಬಳಿ ಹೋಗಿ ಅವರು ಕೇಳಿದಷ್ಟು ಹಣ ತೆತ್ತು ಅವರು ಕೊಡುವ ‘ನಕಲಿ’ ಚುಚ್ಚುಮದ್ದು ಪಡೆದು ಬರುತ್ತಾರೆ.
ಚುಚ್ಚುಮದ್ದು ಪಡೆದ ಕೆಲವೇ ಕ್ಷಣಗಳಲ್ಲಿ ಮಂಡಿ ನೋವು, ತಲೆ ನೋವು, ಚಳಿ– ಜ್ವರ, ಹೊಟ್ಟೆ ನೋವು ಇತ್ಯಾದಿ ಬಾಧೆಗಳು ಉಪಶಮನವಾಗುತ್ತವೆ. ರೋಗಿಗಳು ನಕಲಿ ವೈದ್ಯರ ‘ಕೈಗುಣ’ಕ್ಕೆ ಮಾರುಹೋಗುತ್ತಾರೆ. ಆದರೆ ಮಾರನೆಯ ದಿನ ಎಂದಿನಂತೆ ನೋವು – ಬಾಧೆ ಮರುಕಳಿಸುತ್ತದೆ. ಪುನಃ ಈ ನಕಲಿ ವೈದ್ಯರ ಬಳಿಗೇ ಹೋಗುತ್ತಾರೆ. ತಕ್ಷಣ ನೋವು ನಿಂತರೆ ಅಷ್ಟೇ ಸಾಕು. ಅದೇ ಆನಂದ. ಇದರ ಅಡ್ಡ ಪರಿಣಾಮಗಳ ಬಗ್ಗೆ ರೋಗಿಗಳಿಗೆ ಅರಿವಿರುವುದಿಲ್ಲ.
ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯ ಸಿಬ್ಬಂದಿಯ ಕೊರತೆಯೇ ಈ ನಕಲಿ ವೈದ್ಯರ ಹಾವಳಿ ಹೆಚ್ಚಾಗಲು ಕಾರಣ. ಅನೇಕ ಕಡೆ ನರ್ಸ್ಗಳೇ ವೈದ್ಯರಂತೆ ಕಾರ್ಯ ನಿರ್ವಹಿಸುವುದು ಸಾಮಾನ್ಯವಾಗಿದೆ. ಹಳ್ಳಿಗಳಲ್ಲಿ ಆರೋಗ್ಯ ಸೇವೆ ಸರಿಯಾಗಿ ಒದಗಿಸಲು ಇನ್ನೂ ಸರ್ಕಾರಕ್ಕೆ ಸಾಧ್ಯವಾಗದಿರುವುದು ನೋವಿನ ಸಂಗತಿ. ಆರೋಗ್ಯ ಇಲಾಖೆ ಈಗಲಾದರೂ ಈ ನಿಟ್ಟಿನಲ್ಲಿ ಗಮನ ಹರಿಸಲಿ.
–ಸಾ.ಮ. ಶಿವಮಲ್ಲಯ್ಯ, ಸಾಸಲಾಪುರ, ಕನಕಪುರ ತಾಲ್ಲೂಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.