ಬೆಂಗಳೂರಿನಲ್ಲಿರುವ ಬಹುಪಾಲು ಪ್ರಮುಖ ಶಾಲೆಗಳು ಮುಂಬರುವ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಿದ್ದು, ಕಾನೂನಿನ ಮಾನದಂಡಗಳು ಎಲ್ಲಿಯೂ ಪಾಲನೆಯಾಗುತ್ತಿಲ್ಲ. ಇದು ಶೋಚನೀಯ. ಪ್ರವೇಶ ಶುಲ್ಕದ ನಿಗದಿಯು ತಮ್ಮಿಷ್ಟಕ್ಕೆ ತಕ್ಕಂತೆ ಆಗಿದೆ. ಕೆಲವು ಶಾಲೆಗಳಲ್ಲಿ ಪ್ರೀ ನರ್ಸರಿ ಪ್ರವೇಶಕ್ಕೆ, ₨ 1 ಲಕ್ಷದಿಂದ ₨ 2 ಲಕ್ಷದವರೆಗೆ ನಿಗದಿ ಮಾಡಲಾಗಿದೆ.
ಶುಲ್ಕದ ಸ್ವೀಕೃತಿಯೂ ನ್ಯಾಯಯುತ ಮಾರ್ಗದಲ್ಲಿಲ್ಲ. ಬ್ಯಾಂಕ್ ಚೆಕ್, ಡಿ.ಡಿ. ರೂಪದಲ್ಲಿ ಸ್ವೀಕರಿಸುವುದಿಲ್ಲ. ಕೇವಲ ನಗದು ರೂಪದಲ್ಲಿ, ರಸೀತಿಯನ್ನೂ ಕೊಡದೆ ಸ್ವೀಕರಿಸಲಾಗುವುದೆಂದು ಯಾವುದೇ ಮುಜುಗರವಿಲ್ಲದೇ, ನಿರ್ಭೀತಿಯಿಂದ ಶಾಲಾ ಆಡಳಿತ ಮಂಡಳಿಯವರು ತಿಳಿಸುತ್ತಿದ್ದಾರೆ.
ನ್ಯಾಯಯುತ ಮಾರ್ಗ ಅನುಸರಿಸುವಂತೆ ಪೋಷಕರು ಕೇಳಿದರೆ, ಅವರ ಮಕ್ಕಳಿಗೆ ಪ್ರವೇಶದ ಅರ್ಹತೆ, ಸೌಲಭ್ಯವೇ ಇಲ್ಲದಂತಾಗುವುದು. ಈ ಎಲ್ಲಾ ವಿಷಯಗಳೂ ಶಿಕ್ಷಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೂ ಗೊತ್ತಿವೆ. ಆದರೂ ಮೌನ ವಹಿಸಿದ್ದಾರೆ. ದುಬಾರಿ ಶುಲ್ಕದ ಹಣದಲ್ಲಿ ಇಲಾಖೆಯ ಅಧಿಕಾರಿಗಳಿಗೂ ಒಂದು ಭಾಗ ಸಲ್ಲಿಕೆಯಾಗುತ್ತಿದೆಯೇ?
ಹೀಗಿದ್ದರೆ, ಆರ್.ಟಿ.ಇ. ನಂಥ ಕಾನೂನುಗಳೇಕೆ? ನಮ್ಮಂತಹ ಪೋಷಕರು, ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು, ಇಂತಹ ನ್ಯಾಯಯುತವಲ್ಲದ ವ್ಯವಸ್ಥೆಯಲ್ಲಿ ಪಾಲ್ಗೊಳ್ಳದೇ ಇರಲು ಸಾಧ್ಯವೇ ಇಲ್ಲವೇ? ಸಂಬಂಧಪಟ್ಟವರು ಈ ವಿಷಯದಲ್ಲಿ ಕಾಳಜಿ ವಹಿಸಲಿ ಎಂಬುದೇ ನಮ್ಮ ಕಳಕಳಿ.
–ಡಾ.ಟಿ.ಎಂ. ಲಕ್ಷ್ಮೀಕಾಂತ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.