ADVERTISEMENT

ಪ್ರತ್ಯೇಕ ಬಸ್‌ನಿಲ್ದಾಣ ನಿರ್ಮಿಸಿ

ಕುಂದು ಕೊರತೆ

ಮಹಾಂತೇಶಪ್ಪ ಎಸ್.ಬೆಳಲಗೆರೆ
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST

ನೆಲಮಂಗಲದಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಸಮರ್ಪಕವಾಗಿಲ್ಲದ್ದರಿಂದ ಖಾಸಗಿ ಬಸ್ಸುಗಳು, ಆಟೊಗಳು ಜನತೆಯ ಬದುಕಿನ ಭಾಗವೇ ಆಗಿಹೋಗಿವೆ. ಇಂತಹ ಖಾಸಗಿ ಬಸ್‌, ಅಟೊ, ಟ್ರ್ಯಾಕ್ಸ್‌ಗಳಿಗೆ ನಿಲ್ದಾಣವಿಲ್ಲದೆ ರಸ್ತೆಯೇ ನಿಲ್ದಾಣವಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ನೆಲಮಂಗಲದ ಸರ್ಕಾರಿ ಬಸ್‌ ನಿಲ್ದಾಣದ ಮುಖ್ಯದ್ವಾರದ ಪಕ್ಕದ ರಸ್ತೆಯಲ್ಲಿಯೇ ಖಾಸಗಿ ಬಸ್‌ಗಳು ನಿಲ್ಲುವುದರಿಂದ ಹತ್ತುವವರು, ಇಳಿಯುವವರಿಗೆ ತೊಂದರೆಯಾಗಿದೆ. ಸರ್ಕಾರಿ ಬಸ್‌ ಮತ್ತು ಖಾಸಗಿ ಬಸ್‌ಗಳು ಏಕಕಾಲದಲ್ಲಿ ಹೊರಟರೆ ಸಂಚಾರ ದಟ್ಟಣೆ ಉಂಟಾಗುತ್ತದೆ.

ಖಾಸಗಿಯವರಿಗೆ ನಿಲ್ದಾಣವಿಲ್ಲದ್ದರಿಂದ ರಸ್ತೆಯಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಮತ್ತು ಇಳಿಸುವುದು ಮಾಡಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಅಪಘಾತಗಳು ಸಂಭವಿಸದ ನಿದರ್ಶನಗಳೂ ಇವೆ. ಅಷ್ಟೇ ಅಲ್ಲದೆ ಸಾರ್ವಜನಿಕರು ಮತ್ತು ಬಸ್‌ಗಳ ಸಿಬ್ಬಂದಿ ಹೊಡೆದಾಡಿರುವ ಪ್ರಸಂಗಗಳು ನಡೆದಿವೆ. ಸಂಚಾರ ದಟ್ಟಣೆ ಉಂಟಾಗಿ ನಿತ್ಯವೂ ಪೊಲೀಸರು ಮಧ್ಯ ಪ್ರವೇಶಿಸುವಂತಾಗಿದೆ. ಹಿರಿಯ ನಾಗರಿಕರು, ಮಹಿಳೆಯರು ಬಸ್‌ಗಳನ್ನು ಹತ್ತಲು, ಇಳಿಯಲು ಪಡುವ ಪಾಡು ಅಷ್ಟಿಷ್ಟಲ್ಲ.

ಈ ಎಲ್ಲ ತೊಂದರೆಗಳನ್ನು ನಿವಾರಿಸಲು ಸಂಬಂಧಪಟ್ಟವರು ಖಾಸಗಿಯವರಿಗೆ ಪ್ರತ್ಯೇಕ ನಿಲ್ದಾಣ ಮಾಡಿಕೊಡಬೇಕಾಗಿದೆ. ಇಲ್ಲವಾದರೆ ಇರುವ ಸರ್ಕಾರಿ ಬಸ್‌ ನಿಲ್ದಾಣದಲ್ಲೇ ಸ್ಥಳಾವಕಾಶ ಮಾಡಿಕೊಡಬೇಕಾಗಿದೆ. ಹೀಗಾದಲ್ಲಿ  ಸಂಚಾರ ದಟ್ಟಣೆ ಆಗುವುದು ತಪ್ಪುತ್ತದೆ. ಅಪಘಾತಗಳೂ ಸಂಭವಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.