ADVERTISEMENT

ಪ್ಲಾಸ್ಟಿಕ್ ಪ್ರದರ್ಶನ

ಶಾಂತರಾಜು ಎಸ್‌.
Published 8 ಆಗಸ್ಟ್ 2016, 19:30 IST
Last Updated 8 ಆಗಸ್ಟ್ 2016, 19:30 IST

ಹತ್ತಿರತ್ತಿರ ಕೋಟಿ ಜನರಿರುವ ಬೆಂಗಳೂರಿಗರಿಗೆ ಉಸಿರಾಡಲು ಇರುವ ಬಹುದೊಡ್ಡ ಉದ್ಯಾನಗಳಲ್ಲಿ ಲಾಲ್‌ಬಾಗ್‌ಗೆ ವಿಶೇಷ ಪ್ರಾಮುಖ್ಯತೆ ಇದೆ.

ಜನರನ್ನು ಆಕರ್ಷಿಸಲು ಗಣರಾಜ್ಯ, ಸ್ವಾತಂತ್ರ್ಯ ದಿನ ಮತ್ತು ಇತರ ಸಂದರ್ಭಗಳಲ್ಲಿ ಇಲ್ಲಿ ನಡೆಯುವ ಹಣ್ಣು- ತರಕಾರಿ ಮೇಳಗಳು ನಿಜವಾಗಿ ಯಾರಿಗೆ ಉಪಯುಕ್ತವಾಗುತ್ತಿವೆ ಎಂಬುದನ್ನು ಪ್ರಶ್ನಿಸಬೇಕಿದೆ. ಕಳೆದ ಶನಿವಾರದಿಂದ ಆರಂಭವಾದ ಫಲಪುಷ್ಪ ಪ್ರದರ್ಶನ ಇಂತಹ ಅನುಮಾನಕ್ಕೆ ಎಡೆಮಾಡಿದೆ.

ತಿಂಗಳುಗಟ್ಟಲೆ ಶ್ರಮಿಸಿ, ಗುಲಾಬಿ ಹೂವುಗಳಿಂದ ಸಂಸತ್‌ನಂತಹ ಆಕೃತಿಗಳನ್ನು ನಿರ್ಮಿಸಿರುವ ಕಲೆಗಿಂತ, ಲಾಲ್‌ಬಾಗ್ ಆಕರ್ಷಣೆಗೆ ಒಳಗಾಗುತ್ತಿರುವುದು ತಿಂಡಿ-ತಿನಿಸು ಮತ್ತು ಪ್ಲಾಸ್ಟಿಕ್ ತಿಕ್ಕಲುತನದಿಂದಾಗಿ. ಇರುವ ಕೊಂಚ ಜಾಗದಲ್ಲೇ ಏನಾದರೂ ಗಿಡಗಳನ್ನು ಬೆಳೆಯಬೇಕೆಂಬ ನಗರಿಗರ ಆಸೆಯನ್ನು ಪ್ಲಾಸ್ಟಿಕ್ ಕುಂಡ, ತೋರಿಕೆಯ ಹೈಬ್ರಿಡ್ ಬೀಜದಂಥ ಬಣ್ಣಬಣ್ಣದ ಸಾಮಗ್ರಿಗಳ ಮಾರಾಟಗಾರರು ಉಪಯೋಗಿಸಿಕೊಳ್ಳುತ್ತಿದ್ದಾರೆ.

ತೋಟಗಾರಿಕೆ ಇಲಾಖೆಯಿಂದ ನಡೆಸುವ ಪ್ರದರ್ಶನ, ಪ್ರಾತ್ಯಕ್ಷಿಕೆಗಳು ನೋಡುಗರನ್ನು ಹಸಿರಿನ ಪ್ರೀತಿ, ಕೃಷಿ, ಸರಳ ಬದುಕಿನೆಡೆಗೆ ಚಿಂತಿಸುವಂತೆ ಮಾಡಬಲ್ಲವು. ಆದರೆ, ಇಡೀ ಪ್ರದರ್ಶನ ಪ್ಲಾಸ್ಟಿಕ್ ವ್ಯಾಪಾರಿಗಳು, ಆಯುರ್ವೇದವೆಂದು ಹೇಳಿಕೊಳ್ಳುವ ಉತ್ಪನ್ನ, ಕುರುಕಲು ತಿಂಡಿಯ ಅಡ್ಡೆಯಾಗಿದೆ. ಕೆಂಪೇಗೌಡ ಗೋಪುರದ ಬಂಡೆಯ ಬಳಿ ಸುತ್ತಾಡಿದರೆ, ಹೀಗೆ ತಿಂದು ಬಿಸಾಕಿದ ಕಸದ ರಾಶಿ ಕಣ್ಣಿಗೆ ಬಡಿಯುತ್ತದೆ.

ಒಂದು ಉದ್ಯಾನ, ಪ್ರದರ್ಶನವೆಂದರೆ ಇಷ್ಟೆಯೇ? ಲಾಲ್‌ಬಾಗ್‌ನ ಪ್ರತಿ ಪ್ರದರ್ಶನದಲ್ಲೂ ಎಂತಹ ಮಳಿಗೆ ಅಥವಾ ವ್ಯಾಪಾರಿಗಳಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಇಲಾಖೆಗೆ ಸ್ಪಷ್ಟ ನಿಲುವಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.