ADVERTISEMENT

ಮೀಸಲಾತಿ– ಪ್ರಚಾರ!

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST

ಖಾಸಗಿ ಕ್ಷೇತ್ರದ ಉದ್ದಿಮೆಗಳಲ್ಲೂ ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂಬ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಕಾನೂನು ಇಲಾಖೆ ಆಕ್ಷೇಪಣೆ ವ್ಯಕ್ತಪಡಿಸಿದೆ (ಪ್ರ.ವಾ., ಸೆ. 19) ಎಂದು ವರದಿಯಾಗಿದೆ. ಇದರಲ್ಲಿ ಅಚ್ಚರಿಪಡುವಂಥದ್ದೇನೂ ಇಲ್ಲ. ಬದಲಿಗೆ ರಾಜ್ಯದ ಆಡಳಿತಗಾರರಿಗೆ ನಾಚಿಕೆಯಾಗಬೇಕು.

ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ಸಹಜವಾಗಿ ಬರಬೇಕೇ ವಿನಾ ಮೀಸಲಾತಿಯಿಂದಲ್ಲ. ನೂರಾರು ಕೋಟಿ ಡಾಲರ್ ಲೆಕ್ಕದಲ್ಲಿ ವಹಿವಾಟು ನಡೆಸುವ ಬಹುರಾಷ್ಟ್ರೀಯ ಕಂಪೆನಿಗಳಿಗೆ ನೀರು, ವಿದ್ಯುತ್‌ನಂಥ ಸೌಲಭ್ಯಗಳನ್ನು ರಿಯಾಯ್ತಿ ದರದಲ್ಲಿ ಕೊಡುವ ಸರ್ಕಾರ, ನೆಲದವರಿಗೆ ಕೂಳು ಕೊಡಿ ಎಂದು ಭಿಕ್ಷೆ ಬೇಡುವ ಅಗತ್ಯವುಂಟೇ? ಇದು ಮೀಸಲಾತಿ ಹೆಸರಿನಲ್ಲಿ ‘ಪ್ರಚಾರ’ ಪಡೆಯುವ ರಾಜಕೀಯದ ಬುದ್ಧಿ ಅಲ್ಲವೇ?

ರಾಜ್ಯ, ರಾಷ್ಟ್ರ, ಸಮುದಾಯಗಳ ಹೆಸರಿನಲ್ಲಿ ವೋಟುಗಳನ್ನು ಹಿಡಿದಿಟ್ಟುಕೊಳ್ಳುವುದೇ ಪರಮ ಧ್ಯೇಯವಾದ ಪುಂಡರ ರಾಜಕೀಯದಲ್ಲಿ, ಸಂಸ್ಕೃತಿ-ಸಂಪನ್ನತೆಗಳನ್ನು ಹುಡುಕುವುದು ಸಾಧ್ಯವಿಲ್ಲವೆನ್ನುವುದಕ್ಕೆ ‘ಕನ್ನಡಿಗರಿಗೆ ಮೀಸಲಾತಿ’ ಒಂದು ಹೊಸ ಉದಾಹರಣೆ. ರಾಜ್ಯವೆಂಬ ಘಟಕಕ್ಕೆ ಸಾಂಸ್ಕೃತಿಕ ವೈಶಿಷ್ಟ್ಯವೇ ಆಧಾರ. ಸಂಸ್ಕೃತಿಯನ್ನು ಪ್ರತಿನಿಧಿಸುವುದು ಭಾಷೆ. ಭಾಷಾವಾರು ಪ್ರಾಂತ ರಚನೆಯ ಉದ್ದೇಶವೇ ಇದು ಎನ್ನುವುದು ವಿದ್ಯಾವಂತರಿಗೆ ಅರ್ಥವಾಗುವ ಸಂಗತಿ. ರಾಜಕೀಯ ಆಡಳಿತಗಾರರಲ್ಲಿ ವಿದ್ಯಾಸಂಸ್ಕಾರ ಹುಡುಕುವುದೆಲ್ಲಿ?

ADVERTISEMENT

–ಆರ್. ಕೆ. ದಿವಾಕರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.