ADVERTISEMENT

ಸಂಸದರಿಗೆ ಸಬ್ಸಿಡಿ...

ಕೆ.ಎಂ.ಆನಂದ್‌ಕುಮಾರ್, ಗುಡಿಬಂಡೆ
Published 4 ಅಕ್ಟೋಬರ್ 2015, 19:30 IST
Last Updated 4 ಅಕ್ಟೋಬರ್ 2015, 19:30 IST

ಸಂಸದರ ಸಂಬಳ, ಭತ್ಯೆ ಇತರೆ ಸೌಲಭ್ಯಗಳ ಶಿಫಾರಸಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸ್ವತಂತ್ರ ವೇತನ ಆಯೋಗ ರಚಿಸಲು ಚಿಂತನೆ ನಡೆಸಿದ್ದು, ಇದಕ್ಕೆ ವಿವಿಧ ಪಕ್ಷಗಳು ಸಹಮತ ಸೂಚಿಸಿವೆ. ದೇಶದಲ್ಲಿ ಬಡತನ, ನಿರುದ್ಯೋಗ, ಅನಕ್ಷರತೆಯಂತಹ ಸಮಸ್ಯೆಗಳು ಕೊನೆಗಾಣದಿರುವಾಗ, ನಮ್ಮ ‘ಜನಸೇವಕರು’ ಸಂಬಳ, ಭತ್ಯೆ ಸಾಕಾಗುತ್ತಿಲ್ಲ ಎಂದು ಸಂಕಷ್ಟ ತೋಡಿಕೊಂಡಿದ್ದಾರೆ.

ಜೀವನ ನಡೆಸುವುದು ಕಷ್ಟ ಎಂಬರ್ಥದಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರಿಗೆ ಬಿಪಿಎಲ್‌ ಕಾರ್ಡ್‌ ನೀಡಿದರೆ ಸೂಕ್ತ. ಆಗ ಅವರಿಗೆ ಕಡಿಮೆ ದರದಲ್ಲಿ ಆಹಾರಧಾನ್ಯ ಸಿಗುವುದರ ಜೊತೆಗೆ ಇನ್ನಿತರ ಸೌಕರ್ಯ ಸಹ ದೊರೆಯುತ್ತದೆ.

ಜನಸಾಮಾನ್ಯರ ಸಮಸ್ಯೆ ನಿವಾರಣೆ ಮತ್ತು ದೇಶದ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚಿಸಲು ಇವರನ್ನು ಸಂಸತ್‌ಗೆ ಕಳುಹಿಸಿಕೊಟ್ಟರೆ, ಇವರು ಸಂಬಳ, ಸೌಲಭ್ಯ ಹೆಚ್ಚಿಸಿಕೊಳ್ಳುವುದರಲ್ಲಿ ಹೆಚ್ಚು ಆಸಕ್ತರಾಗಿದ್ದಾರೆ. ಲೋಕಸಭೆಯ ಕಳೆದ ಅಧಿವೇಶನದಲ್ಲಿ  ಚರ್ಚೆ ಸಮರ್ಪಕವಾಗಿ ನಡೆದದ್ದೇ ವಿರಳ. ಈಗಿನ ಸಂಸದರಲ್ಲಿ ಹೆಚ್ಚಿನವರು ಕುಬೇರರು. ಮತ್ತಷ್ಟು ಮಂದಿ ಅಪರಾಧ ಪ್ರಕರಣಗಳ ಹಿನ್ನೆಲೆ ಉಳ್ಳವರು. ಹೀಗಿದ್ದರೂ ಅವರು ಬಡವರೆಂದು ಕರೆಸಿಕೊಳ್ಳಲು ಇಚ್ಛಿಸುತ್ತಾರೆ. ಜನಸಾಮಾನ್ಯರು ತಮ್ಮ ಶ್ರಮದಿಂದ ತುಂಬಿಸುವ ಸರ್ಕಾರಿ ಖಜಾನೆಯನ್ನು ಮನ ಬಂದಂತೆ ಬಗೆದುಕೊಂಡು ದೇಶವನ್ನು ಅಧೋಗತಿಗೆ ಇಳಿಸಲು ಸಂಸದರು ಪ್ರಯತ್ನ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.