‘ದಂಗಲ್’ ಚಿತ್ರದ ನಟಿ ಝೈರಾ ವಾಸಿಮ್ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಿದ್ದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ಮತ್ತು ವಿವಾದಕ್ಕೆ ಕಾರಣವಾಗಿರುವುದು ದುರದೃಷ್ಟಕರ.
ದಿಟ್ಟ ಹುಡುಗಿಯ ಪಾತ್ರದಲ್ಲಿ ಅಷ್ಟೇ ದಿಟ್ಟತನದಿಂದ ಅಭಿನಯಿಸಿರುವ 16 ವರ್ಷದ ಝೈರಾಳನ್ನು ಬೆಂಬಲಿಸಿ ಸ್ಫೂರ್ತಿ ನೀಡುವುದರ ಬದಲು ಕೆಲವು ವ್ಯಕ್ತಿಗಳು ಟೀಕಿಸಿರುವುದು ಅವರ ಸಂಕುಚಿತ ಮನಸ್ಸನ್ನು ತೋರಿಸುತ್ತದೆ.
ಕಾಶ್ಮೀರವು ಭಾರತ ಒಕ್ಕೂಟದ ಅವಿಭಾಜ್ಯ ಅಂಗ ಎನ್ನುವುದು ನಿರ್ವಿವಾದ. ಟೀಕೆ ಮಾಡುವವರ ನಡವಳಿಕೆಯಿಂದ ಪರೋಕ್ಷವಾಗಿ ಪ್ರತ್ಯೇಕತಾವಾದಿಗಳಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ಝೈರಾ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು ಆಕೆಯನ್ನು ಹೆದರಿಸಿ ಒತ್ತಾಯಪೂರ್ವಕವಾಗಿ ಬರೆಸಿಕೊಂಡಿರುವ ಹೇಳಿಕೆ ಎಂಬುದು ಅರ್ಥವಾಗುತ್ತದೆ. ಕ್ಷಮೆ ಯಾಚಿಸುವಂತೆ ಒತ್ತಾಯಿಸುವುದು ಅನ್ಯರ ಭಾವನೆಗಳಿಗೆ ಅಗೌರವ ತೋರಿಸಿದಂತೆ.
-ಪಂಪಾಪತಿ ಹಿರೇಮಠ, ಧಾರವಾಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.