ದಿನವೂ ಮಾಧ್ಯಮಗಳಲ್ಲಿ ಭ್ರಷ್ಟರ ಮುಖಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಜನರಿಗೆ ಕಿರುಕುಳ ನೀಡುವ ಸಣ್ಣ ಪುಟ್ಟ ಲಂಚಕೋರರು ಮಾತ್ರ ಯಾರ ಗಮನಕ್ಕೂ ಬರುವುದೇ ಇಲ್ಲ. ಜನ ವಿವಿಧ ಕೆಲಸಗಳಿಗೆ ನಗರಸಭೆ ಅಥವಾ ಇತರ ಕಚೇರಿಗಳಿಗೆ ಹೋದಾಗ, ಹಣ ಕೊಟ್ಟರಷ್ಟೇ ಕೆಲಸ ಬೇಗ ಮಾಡಿಕೊಡುವುದು ಎಂಬಂಥ ಪರಿಸ್ಥಿತಿ ಇದೆ.
ಹಣ ಇದ್ದವರು ಹೀಗೆ ತಮ್ಮ ಕೆಲಸವನ್ನು ಅಲ್ಪ ಸಮಯದಲ್ಲಿ ಮಾಡಿಸಿಕೊಂಡು ಹೋಗುತ್ತಾರೆ. ಬಡವರ ಪಾಡೇನು? ಜನನ ಪ್ರಮಾಣಪತ್ರಕ್ಕೂ ಹಣ, ಮರಣ ಪ್ರಮಾಣಪತ್ರಕ್ಕೂ ಹಣ. ಎಲ್ಲ ಕಚೇರಿಗಳಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾಗಳು ಇದ್ದರೂ ರಾಜಾರೋಷವಾಗಿ ಅಕ್ರಮ ವ್ಯವಹಾರ ನಡೆಯುತ್ತದೆ. ಇಲ್ಲೆಲ್ಲ ಈ ಕ್ಯಾಮೆರಾಗಳು ನಿಜಕ್ಕೂ ಚಾಲನೆಯಲ್ಲಿ ಇವೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತದೆ. ಇದ್ದರೂ ಅದರಲ್ಲಿ ಸೆರೆಯಾದ ದೃಶ್ಯವನ್ನು ಯಾರೂ ನೋಡುವುದಿಲ್ಲ ಎಂಬ ನಂಬಿಕೆಯೋ ತಿಳಿಯದಾಗಿದೆ.
ಸಾರ್ವಜನಿಕರು ಲಂಚ ಕೊಡದಿರುವ ಮೂಲಕ ಭ್ರಷ್ಟರಿಗೆ ಕುಮ್ಮಕ್ಕು ಕೊಡುವುದನ್ನು ಮೊದಲು ಬಿಡಬೇಕು. ಮೇಲಧಿಕಾರಿಗಳು ತಮ್ಮ ಕಚೇರಿಯಲ್ಲಿ ಅಳವಡಿಸಿದ ಸಿ.ಸಿ. ಟಿ.ವಿ.ಗಳಲ್ಲಿ ಸೆರೆ ಸಿಕ್ಕ ದೃಶ್ಯಗಳನ್ನು ಆಗಾಗ್ಗೆ ಪರಿಶೀಲಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.