ಮೇಕೆದಾಟುವಿನಲ್ಲಿ ಅಣೆಕಟ್ಟುಗಳನ್ನು ಕಟ್ಟುವುದನ್ನು ತಮಿಳುನಾಡು ಸರ್ಕಾರ ವಿರೋಧಿಸಿದ್ದನ್ನು ಪ್ರತಿಭಟಿಸಿ ಇಡೀ ರಾಜ್ಯದಲ್ಲಿ 700ಕ್ಕೂ ಹೆಚ್ಚು ಸಂಘಟನೆಗಳು ಕರ್ನಾಟಕ ಬಂದ್ ಆಚರಿಸಿದವು. ಬೀದಿಯಲ್ಲಿ ನಿತ್ಯ ತರಕಾರಿಯನ್ನು ಮಾರಿ ಹೊಟ್ಟೆ ಹೊರೆಯಬೇಕಾದ ಬಡವನಿಂದ ಹಿಡಿದು, ಮಾಲ್ಗಳನ್ನು ನಡೆಸಿ ಲಕ್ಷಾಂತರ ಗಳಿಸುವ ಸಂಸ್ಥೆಗಳವರೆಗೆ, ಸಾರಿಗೆ, ಉದ್ದಿಮೆ, ಕಚೇರಿ ಹೀಗೆ ಎಲ್ಲರೂ ಬೇಕೋ ಬೇಡವೋ ಈ ಬಂದ್ನಲ್ಲಿ ಭಾಗವಹಿಸಿದರು. ನಿತ್ಯದ ರಂಜನೆ ದುಡಿಮೆಯನ್ನು ನಿಲ್ಲಿಸಿ ಚಿತ್ರೋದ್ಯಮವೂ ಇದರಲ್ಲಿ ಕೈಜೋಡಿಸಿತು. ಆದರೆ, ಇಂಥ ಮಹತ್ವದ ಬಂದ್ಗೆ ಕನ್ನಡದ ಬಹುಪಾಲು ಟಿ.ವಿ. ವಾಹಿನಿಗಳು ಯಾವುದೇ ಬೆಂಬಲವನ್ನು ತೋರಿಸಲಿಲ್ಲ ಎನ್ನುವುದು ವಿಷಾದದ ಸಂಗತಿ.
ಹೌದು, ಸುದ್ದಿವಾಹಿನಿಗಳು ಈ ಹೊತ್ತಿನಲ್ಲಿ ಕೆಲಸ ಮಾಡುವುದು ಸಹಾಯಕವೇ ಸರಿ. ಆದರೆ ನಾನು ಹೇಳುತ್ತಿರುವುದು ಇತರ ಮನರಂಜನಾ ಚಾನೆಲ್ಗಳ ಕುರಿತು. ಶನಿವಾರ ಬಹುಪಾಲು ಕನ್ನಡ ಟಿ.ವಿ. ವಾಹಿನಿಗಳು ದಿನನಿತ್ಯದ ಚಿತ್ರವಿಚಿತ್ರ ಕಳಪೆ ರಂಜನೆಯ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಲೇ ಇದ್ದವು.
ಬಂದ್ ನೆಪದಲ್ಲಿ ಕೆಲಸಕಾರ್ಯ ಬಿಟ್ಟು ಮನೆಯಲ್ಲಿ ಸೋಮಾರಿಗಳಾಗಿ ಕುಳಿತವರೆಗೆ ಭರ್ಜರಿ ರಂಜನೆಯನ್ನು ನೀಡುತ್ತಿದ್ದವು. ಜೊತೆಯಲ್ಲಿ ಎಗ್ಗಿಲ್ಲದೇ ಜಾಹೀರಾತುಗಳನ್ನು ಪ್ರಸಾರ ಮಾಡುತ್ತಲೇ ಇದ್ದವು. ಸುದ್ದಿ ವಾಹಿನಿಗಳೂ ಬರೀ ಸುದ್ದಿ, ವಿಶ್ಲೇಷಣೆ, ಸಂದರ್ಶನಗಳನ್ನು ಪ್ರಸಾರ ಮಾಡಬಹುದಾಗಿತ್ತು.
ಅವೂ ನಿತ್ಯದ ಕಮರ್ಷಿಯಲ್ ಬ್ರೇಕ್ ತೆಗೆದುಕೊಳ್ಳುತ್ತಲೇ ಇದ್ದವು. ಲಕ್ಷಾಂತರ ಗಳಿಸುತ್ತಲೇ ಇದ್ದವು.
ದಿನನಿತ್ಯದ ಹೊಟ್ಟೆಪಾಡಿಗಾಗಿ ನೂರೋ ಇನ್ನೂರೋ ದುಡಿಯಲೇ ಬೇಕಾಗಿರುವ ಬಡವರ ಮೇಲೆ ಇಂಥ ಬಂದ್ಗಳನ್ನು ಅನಿವಾರ್ಯಗೊಳಿಸುವ ವೇದಿಕೆಗಳು ಇದನ್ನು ಏಕೆ ಗಮನಿಸಲಿಲ್ಲ; ಕನ್ನಡ ಟಿ.ವಿ. ವಾಹಿನಿಗಳು ಉಳಿದವರಿಗೆ ಹೇಳುವ ದೇಶಭಕ್ತಿಯ ಉಪದೇಶವನ್ನು ತಾವೇ ಏಕೆ ಪಾಲಿಸಲಿಲ್ಲ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.