ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು ಅಪೇಕ್ಷಣೀಯವಲ್ಲದಿದ್ದರೂ ಅನಿರೀಕ್ಷಿತವಲ್ಲ. ನಮ್ಮ ನ್ಯಾಯಾಂಗ ಸಂಪೂರ್ಣ ಆತ್ಮಸಾಕ್ಷಿ ಕಳೆದುಕೊಂಡಿಲ್ಲ ಎಂಬುದು ಸಮಾಧಾನದ ಸಂಗತಿ.
‘ನ್ಯಾಯಂಗ ಕ್ರಿಯಾಶೀಲತೆ’ಯ (Judicial activism) ಬಗ್ಗೆ ಕಾರ್ಯಾಂಗ ಕಂಗಾಲಾದ ಪ್ರಸಂಗಗಳನ್ನು ಈ ಹಿಂದೆ ಕಂಡಿದ್ದೇವೆ. ಆದರೀಗ ನ್ಯಾಯಾಂಗದ ಆಂಶಿಕ ‘ಜಾಗೃತಿ’, ನ್ಯಾಯ ವ್ಯವಸ್ಥೆಯನ್ನೇ ಪೇಚಿಗೆ ಸಿಲುಕಿಸಿರುವುದು ವಿಚಿತ್ರ ಬೆಳವಣಿಗೆ. ಕೊಕ್ಕೆಯಿಂದಲೋ ಬಿಕ್ಕೆಯಿಂದಲೋ ಸ್ವಾರ್ಥ ಸಾಧಿಸಿಕೊಳ್ಳುವುದು ರಾಜಕೀಯದಲ್ಲಿ ಚಿರಪರಿಚಿತ ಸಂಗತಿ. ಅದು ನ್ಯಾಯಾಂಗದ ಮೇಲೂ ಪ್ರಯೋಗವಾಗುತ್ತಿರಬಹುದೇ ಎಂಬ ಸಂದೇಹ ತರಿಸುವಂಥ ನ್ಯಾಯನಿರ್ಣಯಗಳು ಇತ್ತೀಚಿನ ದಿನಗಳಲ್ಲಿ ಬಂದಿದ್ದವು. ಅದಕ್ಕೆ ಪಂಜು ಹಿಡಿಯುವ ಕೆಲಸವನ್ನು ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಮಾಡಿದ್ದಾರೆ.
ಕಾರ್ಯಾಂಗದ ಅವ್ಯವಹಾರಗಳನ್ನು, ಅದರಲ್ಲಿದ್ದುಕೊಂಡೇ ಬಯಲಿಗೆಳೆಯುತ್ತಿದ್ದವರನ್ನು ಅನ್ಯಾಯದ ವಿರುದ್ಧ ಹೋರಾಡುವವರು (whistle blowers) ಎನ್ನಲಾಗುತ್ತಿತ್ತು. ಈಗಲಾದರೋ, ನ್ಯಾಯಮೂರ್ತಿಗಳು ಕಹಳೆಯನ್ನೇ ಊದಿದ್ದಾರೆ! ಎಚ್ಚೆತ್ತುಕೊಳ್ಳಬೇಕಾದ್ದು ನ್ಯಾಯಾಂಗವಲ್ಲ, ಕಾರ್ಯಾಂಗ-ಶಾಸಕಾಂಗಗಳು ಮತ್ತು ಅದನ್ನು ಉಂಟುಮಾಡುವ ಚುನಾವಣಾ ವ್ಯವಸ್ಥೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.