ADVERTISEMENT

ಆರಂಭ ಹೇಗೋ?

ಸಾಮಗ ದತ್ತಾತ್ರಿ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST

‘ನ್ಯಾಯಾಂಗದ ಪಾಲಿನ ಸುದೀರ್ಘ ವಾರಾಂತ್ಯ!’ (ಪ್ರ.ವಾ., ಜ.14) ಎಂಬ ಶೇಖರ್ ಗುಪ್ತ ಅವರ ಅಂಕಣವನ್ನು ಓದಿದಾಗ, ಮೈಗೆ ಎಣ್ಣೆ ಹಚ್ಚಿಕೊಂಡು ಕುಸ್ತಿ ಅಖಾಡಕ್ಕಿಳಿದ ಪೈಲ್ವಾನನ ಜಾಣತನ ನೆನಪಿಗೆ ಬರುತ್ತದೆ. ಒಬ್ಬ ಚಾಣಾಕ್ಷ ಬರಹಗಾರ, ಜಾಣತನವನ್ನು ಮೆರೆದು ಹೇಗೆ ನುಣುಚಿಕೊಳ್ಳಲು ಸಾಧ್ಯ ಎನ್ನುವುದನ್ನು ಈ ಬರಹ ತೋರಿಸುತ್ತದೆ!

ಲೇಖಕರು ಕೊಲಿಜಿಯಂ ವ್ಯವಸ್ಥೆ ಇರುವ ಇಂದಿನ ದಿನಗಳ ಬಗ್ಗೆ ಬರೆಯುತ್ತ, ‘ನಾಲ್ವರು ನ್ಯಾಯಮೂರ್ತಿಗಳು ಸ್ಫೋಟಿಸಿದ ಬಂಡಾಯವು ಕೆಲವು ‘ಸೂಕ್ಷ್ಮ’ ಪ್ರಕರಣಗಳ ವಿಚಾರಣೆಗೆ ರಚಿಸಿರುವ ಪೀಠಗಳಿಗೆ ಸಂಬಂಧಿಸಿದ್ದು’ ಎಂಬ ಸೂಚನೆ ನೀಡಿದ್ದಾರೆ.

ಪ್ರಕರಣಗಳ ವಿಚಾರಣೆಗೆ ಪೀಠ ರಚಿಸುವುದು ಮುಖ್ಯ ನ್ಯಾಯಮೂರ್ತಿಯವರ ವಿವೇಚನೆಗೆ ಬಿಟ್ಟಿದ್ದು. ಇದು ಕೇವಲ ಆಡಳಿತಾತ್ಮಕ ಅಧಿಕಾರ. ಎಲ್ಲ ನ್ಯಾಯಮೂರ್ತಿಗಳೂ ಸರಿಸಮಾನರು, ಮುಖ್ಯ ನ್ಯಾಯಮೂರ್ತಿ ಅವರಲ್ಲಿ ಮೊದಲಿಗರು ಮಾತ್ರ. ಸುಪ್ರೀಂ ಕೋರ್ಟಿಗೆ ನ್ಯಾಯಮೂರ್ತಿಗಳು ಅರ್ಹತೆಯ ಮೇಲೆ ಆಯ್ಕೆಗೊಳ್ಳುತ್ತಾರೆ.

ADVERTISEMENT

ಆದ್ದರಿಂದ, ಅವರಲ್ಲಿ ಯಾರೂ ಹೆಚ್ಚಲ್ಲ, ಕಡಿಮೆಯೂ ಅಲ್ಲ. ಅವರವರಿಗೆ ವಹಿಸಿದ ಪ್ರಕರಣಗಳನ್ನು ಆಯಾ ನ್ಯಾಯಮೂರ್ತಿ ಸಮರ್ಪಕವಾಗಿ ನಿರ್ವಹಿಸುವ ಅರ್ಹತೆಯುಳ್ಳವರು ಎಂದಾಗ, ಯಾವುದೇ ಪೀಠದ ಹೆಚ್ಚಿನ ಅಥವಾ ಕಡಿಮೆ ಅರ್ಹತೆ ಎಂಬಂಥ ತರತಮ ಭಾವ ಎಲ್ಲಿ ಎನ್ನುವ ಪ್ರಶ್ನೆ ಮುಂದೆ ನಿಲ್ಲುತ್ತದೆ.

ಕೆಲವು ಸೂಕ್ಷ್ಮ ಪ್ರಕರಣಗಳ ಹಂಚಿಕೆಯ ಬಗ್ಗೆ ಈ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಅಸಮಾಧಾನಗೊಂಡಿದ್ದಾರೆಂದರೆ ಈ ಸೂಕ್ಷ್ಮ ಪ್ರಕರಣಗಳು ಈಗ ಯಾವ ಪೀಠಕ್ಕೆ ಹೋಗಿವೆಯೋ ಆ ಪೀಠದ ಕ್ಷಮತೆಯನ್ನು ಈ ನಾಲ್ವರು ಪ್ರಶ್ನಿಸುತ್ತಿದ್ದಾರೆಯೇ ಎನ್ನುವ ಅನುಮಾನ ಬರುವುದು ಸಹಜ ಅಲ್ಲವೇ? ಮಾಧ್ಯಮಗಳ ಮುಖಾಂತರ ವ್ಯಕ್ತಗೊಂಡ ಈ ಅಸಮಾಧಾನ ಆ ಪೀಠಗಳ ಬಗೆಗಿನ ಟೀಕೆಯೂ ಆಗಿಬಿಡುವ ಸಂದರ್ಭ ಇಲ್ಲಿದೆ ಎನಿಸದೇ? ಈ ನಿಟ್ಟಿನಿಂದ ನೋಡಿದಾಗ ಮಾಧ್ಯಮದ ಮುಂದೆ ವಿಷಯ ಪ್ರಸ್ತಾಪವಾಗಿದ್ದು ಉಚಿತವಾಗಿರಲಿಲ್ಲವೆಂದೇ ಹೇಳಬೇಕು. ಈ ವಾರಾರಂಭ ಹೇಗೋ ಎಂತೋ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.