ADVERTISEMENT

‘ಅಭಿವೃದ್ಧಿಗೆ ಭಗೀರಥ ಪ್ರಯತ್ನ ಮಾಡಬೇಕು’

ಪೀರ್‌ ಪಾಶ, ಬೆಂಗಳೂರು
Published 13 ಮೇ 2017, 19:30 IST
Last Updated 13 ಮೇ 2017, 19:30 IST

ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ‘ಭಗೀರಥಜಯಂತಿ’ ಕಾರ್ಯಕ್ರಮ ನಡೆದಿತ್ತು. ನಿರೂಪಕರು ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾರ್ಯಕ್ರಮದುದ್ದಕ್ಕೂ ಗುಣಗಾನ ಮಾಡಿದ್ದೇ ಮಾಡಿದ್ದು, ಸಭಿಕರು ಸಹ ಆಗಾಗ ಜೈಕಾರ ಹಾಕಿದರು. ಸ್ವಾಗತ ಭಾಷಣ ಹಾಗೂ ಪ್ರಾಸ್ತಾವಿಕ ನುಡಿಗಳಲ್ಲಿಯೂ ಸರ್ಕಾರದ ಸಾಧನೆಗಳು ಅಟ್ಟಏರಿ ಕುಳಿತವು.

ಭಗೀರಥರ ಕುರಿತು ಉಪನ್ಯಾಸ ನೀಡಲು ತಿಪಟೂರಿನಿಂದ ನಿವೃತ್ತ ತಹಶೀಲ್ದಾರ್‌ ಒಬ್ಬರನ್ನು ಆಹ್ವಾನಿಸಲಾಗಿತ್ತು. ಅವರೋ, ಸಿದ್ದರಾಮಯ್ಯರ ಗುಣಗಾನದಿಂದಲೇ ಉಪನ್ಯಾಸ ಆರಂಭಿಸಿದರು. ಬಳಿಕ ಸುಮಾರು ಅರ್ಧಗಂಟೆ ಕಾಲ ಪುರಾಣದ ಕಥೆಗಳನ್ನು ಜೋಡಿಸುತ್ತ, ಭಗೀರಥರ ಚರಿತೆಯನ್ನು ಹೇಳುತ್ತ ಹೋದರು.

ಸಮಯದ ಅಭಾವವಿದೆ. ಬೇಗ ಮುಗಿಸಿ’ ಎಂದು ಮುಖ್ಯಮಂತ್ರಿಗಳೇ ಸೂಚನೆ ನೀಡಿದಾಗ ಅವರ ಉಪನ್ಯಾಸಕ್ಕೆ ವಿರಾಮ ಬಿತ್ತು.

ADVERTISEMENT

ಬಳಿಕ ಮಾತು ಆರಂಭಿಸಿದ ಮುಖ್ಯಮಂತ್ರಿ, ‘ಉಪ್ಪಾರ ಸಮುದಾಯ ಹಿಂದುಳಿದಿದೆ. ನೀವು ಮುಂದೆ ಬರಬೇಕಾದರೆ ಏನು ಮಾಡಬೇಕು ಗೊತ್ತೇನು? ಎಂಬ ಪ್ರಶ್ನೆಯನ್ನು ಸಭಿಕರತ್ತ ಎಸೆದರು.

ತಕ್ಷಣ ಎದ್ದ ಸಭಿಕರೊಬ್ಬರು, ‘ಸಮುದಾಯದ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ ‘ಭಗೀರಥ ಪ್ರಯತ್ನ’ ಮಾಡುತ್ತಿರಬೇಕು’ ಎಂದಾಗ ನಗುವ ಸರದಿ ಸಭಿಕರದ್ದಾಗಿತ್ತು.

‘ಹಾಗಲ್ಲಪ್ಪ, ಎಲ್ಲರೂ ಶಿಕ್ಷಣ ಪಡೆದಾಗ ಸಮುದಾಯಗಳೂ ಅಭಿವೃದ್ಧಿಯಾಗುತ್ತವೆ’ ಎಂದು ಮುಖ್ಯಮಂತ್ರಿ ತಿಳಿಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.