ADVERTISEMENT

ನಾ ಇಂಗ್ಲೀಷ್‌ನಲ್ಲಿ ಮಾತನಾಡಲ್ಲ

ಡಿ.ಬಿ, ನಾಗರಾಜ
Published 19 ಆಗಸ್ಟ್ 2017, 19:30 IST
Last Updated 19 ಆಗಸ್ಟ್ 2017, 19:30 IST

ವಿಜಯಪುರ: ‘ನಾ ಇಂಗ್ಲಿಷ್‌ನಲ್ಲಿ ಮಾತಾಡಲ್ಲ. ನೀ ಹೇಳಿಯಲ್ಲಾ ಅಷ್ಟೇ ಸಾಕು. ಎಲ್ಲಾನೂ ನಡೆಯುತ್ತೆ...’

ವಿಜಯಪುರದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮಾಡಿಕೊಂಡ ಮನವಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗ ಸಭೆಯಲ್ಲೇ ಉತ್ತರ ನೀಡಿದ ಧಾಟಿಯಿದು.

ನಗರದಲ್ಲಿ ಈಚೆಗೆ ಮೂರು ದಿನ ನಡೆದ ‘ಬರ ಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶ’ದ ಸಮಾರೋಪ ಸಮಾರಂಭದಲ್ಲಿ ‘ವಿಜಯಪುರ ಘೋಷಣೆ–2017’ ಅನಾವರಣಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವ ಸಂದರ್ಭ, ಸಚಿವ ಎಂ.ಬಿ.ಪಾಟೀಲ ‘ದೇಶದ 30 ರಾಜ್ಯಗಳ ಪ್ರತಿನಿಧಿಗಳು ಇಲ್ಲಿದ್ದಾರೆ. ಕನ್ನಡದಲ್ಲಿ ಮಾತನಾಡಿದರೆ ಅವರಿಗೆ ಅರ್ಥವಾಗಲ್ಲ. ದಯವಿಟ್ಟು ನೀವು ಇಂಗ್ಲಿಷ್‌ನಲ್ಲಿ ಮಾತನಾಡಿ’ ಎಂದು ಮನವಿ ಮಾಡಿದರು.

ADVERTISEMENT

ಇದಕ್ಕೆ ಸ್ಪಂದಿಸದ ಸಿ.ಎಂ. ‘ಈಗಾಗಲೇ ನೀ ಇಂಗ್ಲಿಷ್‌ನಲ್ಲಿ ಹೇಳಿಯಲ್ಲಪ್ಪಾ. ಅದೇ ಅವರಿಗೆ ಅರ್ಥವಾಗುತ್ತೆ ಬಿಡು. ನಾ ಮಾತಾಡೋದು ಕನ್ನಡದಲ್ಲೇ ಎಂದು ಪಾಟೀಲರ ಮನವಿ ತಿರಸ್ಕರಿಸಿ, ಮಾತೃಭಾಷೆಯಲ್ಲೇ ತಮ್ಮ ಎಂದಿನ ಶೈಲಿಯಲ್ಲಿ ಮಾತು ಮುಂದುವರೆಸುತ್ತಿದ್ದಂತೆ, ನೆರೆದಿದ್ದ ಜನಸ್ತೋಮದ ಕರತಾಡನ, ಶಿಳ್ಳೆ ಮುಗಿಲು ಮುಟ್ಟಿದವು. ಜೈಕಾರದ ಘೋಷಣೆಗಳು ಮಾರ್ದನಿಸಿದವು. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಮೊಗದಲ್ಲಿ ಮಂದಹಾಸ ಮೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.